ಕೂಡ್ಲಿಗಿಯೋ, ಬಳ್ಳಾರಿ ಗ್ರಾಮೀಣವೋ: ನಾಗೇಂದ್ರ ಸ್ಪರ್ಧೆ ಎಲ್ಲಿಂದ?
ಬಳ್ಳಾರಿ, ಮಾರ್ಚ್ 5: ರೆಡ್ಡಿ ಸಹೋದರರ ಗುಂಪಿನಿಂದ ಸಿಡಿದು ಸ್ವತಂತ್ರವಾಗಿ ಬೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಸೇರಿರುವ ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ. ನಾಗೇಂದ್ರ ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
ಬಿ. ನಾಗೇಂದ್ರ ಆಪ್ತರ ಪ್ರಕಾರ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮುನ್ನೂರಕ್ಕೂ ಹೆಚ್ಚಿನ ಮುಖಂಡರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿರುವ ಬಿ. ನಾಗೇಂದ್ರ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಮತ್ತು ಸಣ್ಣ ಫಕ್ಕೀರಪ್ಪ ಜಂಟಿಯಾಗಿ ಆರಂಭಿಸಿರುವ ಚುನಾವಣಾ ಪ್ರಚಾರದಿಂದ ವಿಚಲಿತರಾಗಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿಗೆ ಆಘಾತ: ಕೈ ಹಿಡಿಯಲು ಮುಂದಾದ ಕೂಡ್ಲಿಗಿ ಶಾಸಕ ನಾಗೇಂದ್ರ
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದಲ್ಲಿ ಗೆಲುವು ಕಷ್ಟ ಆಗುತ್ತದೆ. , ವಾಲ್ಮೀಕಿ ಜನಾಂಗದಲ್ಲಿ ಉತ್ತಮ ಸಂಪರ್ಕಗಳನ್ನು ಕಾಪಾಡಿಕೊಂಡು ಬರಲು ಕೂಡ್ಲಿಗಿಯಿಂದಲೇ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸುವ ಕುರಿತು ಅಭಿಪ್ರಾಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರೊಂದಿಗೆ ಅನೇಕ ಸುತ್ತು ಮಾತನಾಡಿರುವ ಬಿ. ನಾಗೇಂದ್ರ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಅಥವಾ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಒಂದಿಷ್ಟು ಕಾಲಾವಕಾಶದ ಅಗತ್ಯವಿದೆ. ತುರ್ತಾಗಿ ನಾನು ಯಾವುದೇ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಚುನಾವಣಾ ಪ್ರಚಾರ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷ ಬಯಸಿದರೆ ಮಾತ್ರ ಕ್ಷೇತ್ರ ಬದಲಾಯಿಸುವೆ : ಬಿ. ನಾಗೇಂದ್ರ
ಒಟ್ಟಾರೆ ಸುಭದ್ರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಬಿ. ನಾಗೇಂದ್ರ ಅವರಿಗೆ ಮುಕ್ತ ಅವಕಾಶ ಇದ್ದರೂ ರಾಜಕೀಯವಾಗಿ ಗೊಂದಲದಲ್ಲಿದ್ದಾರೆ.