ಜಸ್ಟ್ 28, ಸುರಸುಂದರನಿಗೆ ಸಿಕ್ಕಿತು ಸಿರುಗುಪ್ಪ 'ಕೈ' ಟಿಕೆಟ್
Recommended Video
ಬಳ್ಳಾರಿ, ಏಪ್ರಿಲ್ 16: 'ಜಸ್ಟ್ 28 ಏಜ್. ನಾನಿನ್ನೂ ಬ್ಯಾಚ್ಯುಲರ್ ಸಾರ್. ಎಲೆಕ್ಷನ್ ಗೆ ಸ್ಪರ್ಧೆ ಮಾಡುತ್ತಿರುವೆ. ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ, ಮುಖಂಡರು ನನ್ನ ಮೇಲಿಟ್ಟಿರುವ ನಂಬಿಕೆ - ಭರವಸೆಗಳನ್ನು ಉಳಿಸಿಕೊಳ್ಳುವ ನಂಬಿಕೆ ಇದೆ'.
- ಇದು ಸಿರುಗುಪ್ಪ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಬಿ. ಮುರಳಿಕೃಷ್ಣ ಅವರ ಮಾತು. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿಬಿಎಂ ಪದವಿ ಓದಿರುವ ಇವರು, ಸಾರ್ವಜನಿಕ ಸೇವಾ ಉತ್ಸಾಹದಿಂದಲೇ ನೇರವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸಿರುಗುಪ್ಪ : ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ
ಸೋದರಮಾವ, ಕೂಡ್ಲಿಗಿಯ ಶಾಸಕ ಬಿ. ನಾಗೇಂದ್ರ ಅವರ ಗರಡಿಯಲ್ಲಿ ರಾಜಕೀಯದ ಪಟ್ಟುಗಳನ್ನು ಕಲಿಯುತ್ತಿರುವ ಇವರು, ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಂದೆ ಬಿ. ಕೃಷ್ಣಪ್ಪ, 59, ಬೆಸ್ಕಾಂನಲ್ಲಿ ಇಂಜಿನಿಯರ್. ಹಿರಿಯ ಅಧಿಕಾರಿ. ತಾಯಿ ಬಿ. ರಾಜೇಶ್ವರಿ, ಬಿಎ ಪದವೀಧರೆ. ಸೋದರ ವಂಶಿಕೃಷ್ಣಗೆ 24 ವರ್ಷ, ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದು, ಸ್ವಂತ ವ್ಯವಹಾರ ಪ್ರಾರಂಭಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಾಲ್ಯದಿಂದಲೂ ಜನಸೇವೆ, ಜನಪ್ರತಿನಿಧಿಗಳತ್ತ ಆಕರ್ಷಣೆ ಹೊಂದಿದ್ದ ಮುರಳಿಕೃಷ್ಣ, ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿದ ಆರೋಪಕ್ಕೂ ಗುರಿಯಾಗಿದ್ದಾರೆ. ಸಿರುಗುಪ್ಪದ ಕಾಂಗ್ರೆಸ್ ಶಾಸಕ ಬಿ.ಎಂ. ನಾಗರಾಜ್ ಅವರು 'ಮತ್ತೊಮ್ಮೆ ಸ್ಪರ್ಧಿಸುವುದಿಲ್ಲ' ಎನ್ನುತ್ತಿದ್ದಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದ ಯುವ ಮುಖಂಡ ಬಿ. ಮುರಳಿಕೃಷ್ಣ ಅವರತ್ತ ಕಾಂಗ್ರೆಸ್ಸಿನವರ ಚಿತ್ತ ಹರಿದಿತ್ತು.
ಕೊನೆಯದಾಗಿ ಟಿಕೆಟ್ ಗಿಟ್ಟಿಸಿಯೇಬಿಟ್ಟರು. ನಾಮಪತ್ರ ಸಲ್ಲಿಸಿ, ಪ್ರಚಾರ ಆರಂಭಿಸಬೇಕಿದೆ. ಒನ್ಇಂಡಿಯಾ ಕನ್ನಡಕ್ಕಾಗಿ ಅವರು ನೀಡಿದ ಸಂದರ್ಶನ ಇಲ್ಲಿದೆ
ಪ್ರಶ್ನೆ: ರಾಜಕೀಯಕ್ಕೆ ಏಕೆ ಬರುತ್ತಿದ್ದೀರಿ?
ಮುರಳಿಕೃಷ್ಣ: ಸಮಾಜ ಸೇವೆಯ ಮೂಲಕ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಿದೆ. ಜನಸೇವೆಯ ಗುರಿಯೊಂದಿಗೆ ರಾಜಕೀಯ ಪ್ರವೇಶಿಸುತ್ತಿದ್ದೇವೆ.
ಪ್ರಶ್ನೆ: ಯುವಶಕ್ತಿ, ವಿದ್ಯಾವಂತರು ರಾಜಕೀಯ, ಚುನಾವಣೆಯಿಂದ ದೂರ ಸರಿಯುತ್ತಿರುವಾಗ ನೀವೇಕೆ ಇತ್ತ?
ಮುರಳಿಕೃಷ್ಣ: ವಿದ್ಯಾವಂತರು ರಾಜಕೀಯಕ್ಕೆ ಬಂದಾಗಲೇ ಸಮಾಜವನ್ನು ಸಮರ್ಥವಾಗಿ ಕಟ್ಟಲು, ಜನರ ಬೇಕು - ಬೇಡಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪ್ರಜಾಪ್ರಭುತ್ವ ಯಶಸ್ಸು ಸಾಧಿಸಲು ವಿದ್ಯಾವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯ ರಾಜಕೀಯಕ್ಕೆ ಬರಬೇಕಿದೆ.
ಪ್ರಶ್ನೆ: ನಿಮ್ಮ ಪಾಲಿಗೆ ಆದರ್ಶ ರಾಜಕಾರಣಿ ಯಾರು?
ಮುರಳಿಕೃಷ್ಣ: ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ, ಆಡಳಿತ, ನಾಯಕರು ನನ್ನ ಆದರ್ಶ. ಕಾಂಗ್ರೆಸ್ ನಲ್ಲಿ ಆಂತರಿಕ ಮತ್ತು ಬಾಹ್ಯ ಪ್ರಜಾಪ್ರಭುತ್ವ ಇದೆ. ಅದೇ ಕಾರಣಕ್ಕೆ ನನ್ನಂಥ ಯುವಕರಿಗೆ ಪ್ರೋತ್ಸಾಹ ಸಿಕ್ಕಿದೆ. ಪಕ್ಷದ ನೀತಿ- ನಿಯಮಗಳು, ನಾಯಕರೇ ನನ್ನ ಆದರ್ಶ.
ಪ್ರಶ್ನೆ: ಟಿಕೆಟ್ ವಂಚಿತ ಶಾಸಕರ ಭಿನ್ನಮತ ಶಮನ ಹೇಗೆ ಮಾಡ್ತೀರಿ?
ಮುರಳಿಕೃಷ್ಣ: ನಾನು ಅನನುಭವಿ. ಪಕ್ಷದ ಹಿರಿಯ ಮುಖಂಡರು, ಪಕ್ಷದ ಎಲ್ಲರೂ ಒಟ್ಟಾಗಿ ಕೂತು ಹಾಲಿ ಶಾಸಕ, ಹಿರಿಯ ಕಾಂಗ್ರೆಸ್ಸಿಗ ಬಿ.ಎಂ.ನಾಗರಾಜ್ ಅವರ ಜೊತೆ ಚರ್ಚೆ ಮಾಡಿ, ಭಿನ್ನಮತ ಪರಿಹರಿಸಿಕೊಳ್ಳುವೆ. ಅವರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸುವೆ. ಅವರನ್ನು ಕ್ಷೇತ್ರದ ಹಿರಿಯರನ್ನಾಗಿ ಗೌರವಿಸಿ - ಅಭಿನಂದಿಸುವೆ.
ಪ್ರಶ್ನೆ: ನಿಮಗೆ ಕ್ಷೇತ್ರದ ಪರಿಚಯ ಇದೆಯೇ?
ಮುರಳಿಕೃಷ್ಣ: ನಾನು ಬೆಂಗಳೂರಿನಲ್ಲಿ ಓದಿದ್ದರೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಮಗ್ರ ಮಾಹಿತಿ ಪಡೆದಿದ್ದೇನೆ. ಹಾಲಿ ಶಾಸಕರು 'ಮತ್ತೊಮ್ಮೆ ನಾನು, ಸ್ಪರ್ಧಿಸುವುದಿಲ್ಲ' ಎಂದ ಕ್ಷಣದಿಂದಲೇ ಕ್ಷೇತ್ರದ ಅಧ್ಯಯನ ನಡೆಸಿದ್ದೇನೆ. ಪ್ರಚಾರದ ಸಂದರ್ಭದಲ್ಲಿ ಜನರೊಂದಿಗೆ ಮಾತನಾಡಿ, ಅವರ ಅವಶ್ಯಕತೆಗಳನ್ನು, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸುತ್ತೇನೆ. ಆಸಕ್ತರು ಸಲಹೆ - ಸೂಚನೆ ನೀಡಲು ಸಂಪರ್ಕಿಸಿ : ಇ - ಮೇಲ್ ಐಡಿ[email protected]