ಕೈ ತಪ್ಪಿದ ಕಾಂಗ್ರೆಸ್ ಟಿಕೆಟ್, ಬಿಜೆಪಿ ಸೇರಿದ ಎನ್.ವೈ.ಗೋಪಾಲಕೃಷ್ಣ
ಬಳ್ಳಾರಿ, ಏಪ್ರಿಲ್ 20 : ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾಗೊಂಡಿದ್ದ ಎನ್.ವೈ.ಗೋಪಾಲಕೃಷ್ಣ ಬಿಜೆಪಿ ಸೇರಿದ್ದಾರೆ. ಕೂಡ್ಲಗಿ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಶುಕ್ರವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಐದು ಬಾರಿಯ ಶಾಸಕ ಎನ್.ವೈ.ಗೋಪಾಲಕೃಷ್ಣ ಬಿಜೆಪಿ ಸೇರಿದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
'ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ನಿಷ್ಠಾವಂತರನ್ನು ಕಡೆಗಣಿಸಿದ್ದಾರೆ. ಟಿಕೆಟ್ ನಿರಾಕರಿಸಲು ಸ್ಪಷ್ಟವಾದ ಕಾರಣವನ್ನೇ ನೀಡಲಿಲ್ಲ. ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿತು. ನಾನು ಬಿಜೆಪಿ ಸೇರಿದ್ದೇನೆ, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವೆ' ಎಂದು ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಎನ್.ವೈ.ಗೋಪಾಲಕೃಷ್ಣ 'ಕೈ' ತಪ್ಪಲಿದೆ ಬಳ್ಳಾರಿ ಟಿಕೆಟ್
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ಅವರು, ಗುರುವಾರ ಸ್ಪೀಕರ್ ಬಿ.ಕೆ. ಕೋಳಿವಾಡ ಅವರನ್ನು ರಾಣೆಬೆನ್ನೂರಿನ ಗೃಹ ಕಚೇರಿಯಲ್ಲಿ ಭೇಟಿ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಛಲವಾದಿ ನಾರಾಯಣ ಸ್ವಾಮಿ, ಕೆಪಿಸಿಸಿ ವಕ್ತಾರರಾಗಿದ್ದ ಪೂರ್ಣಿಮಾ ಮಲ್ಲೇಶ್ ಅವರು ತಮ್ಮ ಅಪಾರ ಬೆಂಬಲಿಗರ ಜೊತೆಯಲ್ಲಿ ಬಿಜೆಪಿ ಸೇರಿದರು.
ಪಕ್ಷಕ್ಕೆ ನೂತನ ಮುಖಂಡರನ್ನು ಸೇರಿಸಿಕೊಂಡ ಬಳಿಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, 'ಎನ್.ವೈ. ಗೋಪಾಲಕೃಷ್ಣ ಅವರು ಹಿರಿಯ ಮುಖಂಡರು, ಪ್ರಭಾವಿಗಳು. ಯಾವುದೇ ಷರತ್ತು ಇಲ್ಲದೇ ಪಕ್ಷವನ್ನು ಸೇರಿದ್ದಾರೆ. ಪಕ್ಷ ಅವರನ್ನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ' ಎಂದು ಹೇಳಿದರು.