ಚಿತ್ರಗಳು : ಬಳ್ಳಾರಿಯಲ್ಲಿ ರೈತ ಚೈತನ್ಯ ಯಾತ್ರೆ ಆರಂಭಿಸಿದ ಬಿಜೆಪಿ
ಬಳ್ಳಾರಿ, ಅಕ್ಟೋಬರ್ 01 : ಬಳ್ಳಾರಿಯಿಂದ-ನರಗುಂದದವರೆಗಿನ 2ನೇ ಹಂತದ ರೈತ ಚೈತನ್ಯ ಯಾತ್ರೆಗೆ ಕರ್ನಾಟಕ ಬಿಜೆಪಿ ಗುರುವಾರ ಬಳ್ಳಾರಿಯಲ್ಲಿ ಚಾಲನೆ ನೀಡಿದೆ. 'ಬಿಜೆಪಿಯವರು ನಡೆಸುತ್ತಿರುವುದು ರೈತ ಚೈತನ್ಯ ಯಾತ್ರೆಯಲ್ಲ, ಬಿಜೆಪಿ ಚೈತನ್ಯ ಯಾತ್ರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಅಕ್ಟೋಬರ್ 1 ರಿಂದ 11 ರ ತನಕ ಬಿಜೆಪಿಯ ಎರಡನೇ ಹಂತದ ರೈತ ಚೈತನ್ಯ ಯಾತ್ರೆ ನಡೆಯಲಿದೆ. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಾಯಕರ ಮೂರು ತಂಡ ಬಳ್ಳಾರಿಯಿಂದ-ನರಗುಂದದ ತನಕ ಯಾತ್ರೆ ನಡೆಸಲಿದೆ. [ಸಿದ್ದು ಸರ್ಕಾರ ಕೋಮಾವಸ್ಥೆಯಲ್ಲಿದೆ: ಯಡಿಯೂರಪ್ಪ]
ಗುರುವಾರ ಬಳ್ಳಾರಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ ಮುಂತಾದ ನಾಯಕರು ರೈತ ಚೈತನ್ಯ ಯಾತ್ರೆಗೆ ಚಾಲನೆ ನೀಡಿದರು. ನಿದ್ದೆಯಲ್ಲಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಲು, ಸಂಕಷ್ಟದಲ್ಲಿರುವ ರೈತರಲ್ಲಿ ವಿಶ್ವಾಸ ಮೂಡಿಸಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. [ಯಡಿಯೂರಪ್ಪ ಸಂದರ್ಶನ ಓದಿ]
ಬಿಜೆಪಿಯ ರೈತ ಚೈತನ್ಯ ಯಾತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 'ಬಿಜೆಪಿ ರೈತರಿಗಾಗಿ ಏನೂ ಮಾಡಿಲ್ಲ. ಯಡಿಯೂರಪ್ಪ ಅವರು ಹತಾಶರಾಗಿದ್ದಾರೆ. ಬಿಜೆಪಿಯವರು ಮಾಡುತ್ತಿರುವುದು ರೈತ ಚೈತನ್ಯ ಯಾತ್ರೆಯಲ್ಲ, ಬಿಜೆಪಿ ಚೈತನ್ಯ ಯಾತ್ರೆ' ಎಂದು ಅವರು ವ್ಯಂಗ್ಯವಾಡಿದ್ದಾರೆ.
ರೈತ ಚೈತನ್ಯ ಯಾತ್ರೆಗೆ ಚಾಲನೆ ನೀಡಿದ ಬಿಜೆಪಿ
ಬಳ್ಳಾರಿಯಿಂದ-ನರಗುಂದದವರೆಗಿನ 2ನೇ ಹಂತದ ರೈತ ಚೈತನ್ಯ ಯಾತ್ರೆಗೆ ಕರ್ನಾಟಕ ಬಿಜೆಪಿ ಗುರುವಾರ ಚಾಲನೆ ನೀಡಿದೆ. ಅಕ್ಟೋಬರ್ 1ರ ಗುರುವಾರ ಬಳ್ಳಾರಿಯಲ್ಲಿ ಆರಂಭವಾದ ಯಾತ್ರೆ ಅಕ್ಟೋಬರ್ 11ರಂದು ನರಗುಂದದಲ್ಲಿ ಮುಕ್ತಾಯಗೊಳ್ಳಲಿದೆ. ಮೂರು ತಂಡಗಳಲ್ಲಿ ಬಿಜೆಪಿ ನಾಯಕರು ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ನಡೆಸಲಿದ್ದಾರೆ.
ಎಲ್ಲೆಲ್ಲಿ ನಡೆಯಲಿದೆ ಯಾತ್ರೆ?
ಎರಡನೇ ಹಂತದ ರೈತ ಚೈತನ್ಯ ಯಾತ್ರೆ ಬಳ್ಳಾರಿ, ಮೊಳಕಾಲ್ಮೂರು, ಹೊಳಲ್ಕೆರೆ, ಚನ್ನಗಿರಿ, ಹೊನ್ನಾಳಿ, ಅರಸೀಕೆರೆ, ತರೀಕೆರೆ, ಮುದ್ದೇಬಿಹಾಳ, ಬಸವನಬಗೇವಾಡಿ, ವಿಜಯಪುರ, ಬೀಳಗಿ, ರಾಯಭಾಗ, ಹುಕ್ಕೇರಿ, ಗೋಕಾಕ್, ನವಲಗುಂದ ಮುಂತಾದ ಸ್ಥಳಗಳಲ್ಲಿ ನಡೆಯಲಿದೆ.
ಮೂರು ತಂಡಗಳಿಂದ ಚೈತನ್ಯ ಯಾತ್ರೆ
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಮೂರು ತಂಡಗಳು ವಿವಿಧ ಜಿಲ್ಲೆಗಳಲ್ಲಿ ರೈತ ಚೈತನ್ಯ ಯಾತ್ರೆ ನಡೆಸಲಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲಿವೆ.
ಬಿಜೆಪಿಯ ಆಗ್ರಹಗಳು
ರೈತರ 2 ಲಕ್ಷದೊಳಗಿನ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಕ್ಷಣ ಪರಿಹಾರ ವಿತರಣೆ ಮಾಡಬೇಕು, ಕೃಷಿ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಕಲ್ಪಿಸಬೇಕು, ಹಾಲಿನ ದರ ಹೆಚ್ಚಿಸಬೇಕು ಹಾಗೂ ಹಾಲು ಸಂಗ್ರಹಣೆಯ ರಜಾದಿನವನ್ನು ರದ್ದುಪಡಿಸಬೇಕು, ಬಗರ್ಹುಕುಂ ಸಾಗುವಳಿ ಜಮೀನನ್ನು ಸಕ್ರಮಗೊಳಿಸಬೇಕು, ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ಯಾತ್ರೆ ಲೇವಡಿ ಮಾಡಿದ ಸಿದ್ದರಾಮಯ್ಯ
ಬಿಜೆಪಿಯ ರೈತ ಚೈತನ್ಯ ಯಾತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ. 'ಬಿಜೆಪಿ ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿ ರೈತರಿಗೆ ಏನು ಮಾಡಿದೆ? ಎಂಬುದು ನಮಗೆ ಗೊತ್ತಿದೆ. ಬಿಜೆಪಿಯವರು ಮಾಡುತ್ತಿರುವುದು ರೈತ ಚೈತನ್ಯ ಯಾತ್ರೆಯಲ್ಲ, ಬಿಜೆಪಿ ಚೈತನ್ಯ ಯಾತ್ರೆ' ಎಂದು ಅವರು ಲೇವಡಿ ಮಾಡಿದರು.