ಕಂಪ್ಲಿ: ಸರಸ್ವತಿಗೆ 'ಕೈ' ಟಿಕೆಟ್ ಸಿಕ್ಕರೆ ಸುರೇಶ್ ಬಾಬು ಗೆದ್ದಂತೆಯೇ!
ಬಳ್ಳಾರಿ, ಏಪ್ರಿಲ್ 11: ಕಂಪ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಚ್. ಸುರೇಶ್ ಬಾಬು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸರಸ್ವತಿ ಕೆ.ಎಸ್.ಎಲ್. ಸ್ವಾಮಿ ಅವರ ಸ್ಪರ್ಧೆ ಬಹುತೇಕ ಅಂತಿಮಗೊಳ್ಳಲಿದೆ. ಕಾಂಗ್ರೆಸ್ ವಲಯಗಳ ಪ್ರಕಾರ, ಸರಸ್ವತಿ ಅವರ ಪ್ರತಿಸ್ಪರ್ಧಿ ಗಣೇಶ್ ಜನಪ್ರಿಯರಾಗಿದ್ದರೂ ಕಾಂಗ್ರೆಸ್ ಮುಖಂಡರ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಈ ಹಿನ್ನೆಲೆಯಲ್ಲಿ ಸರಸ್ವತಿ ಅವರ ಹೆಸರು ಬಹುತೇಕ ಅಂತಿಮಗೊಳ್ಳಲಿದೆ. ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಬಿ.ಎಸ್.ಆನಂದಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಮತ್ತು ಇತರ ಮುಖಂಡರ ಬೆಂಬಲ ಸರಸ್ವತಿ ಅವರಿಗೆ ಸಿಕ್ಕಿದೆ. ಅಲ್ಲದೇ, ಸರಸ್ವತಿ ಪರವಾಗಿ ಅವರ ಪತಿ, ವಿಧಾನಪರಿಷತ್ ನ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ ತೀವ್ರ ಲಾಭಿ ನಡೆಸಿದ್ದಾರೆ.
ದೆಹಲಿಯಲ್ಲಿ ಬೀಡು ಬಿಟ್ಟು, ಟಿಕೆಟ್ ಗಾಗಿ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ವಾಲ್ಮೀಕಿ ಜನಾಂಗದಲ್ಲಿಯೇ ಸರಸ್ವತಿ ಸ್ಪರ್ಧೆಗೆ ತೀವ್ರ ವಿರೋಧವಿದೆ. ಕಾಂಗ್ರೆಸ್ ನ ಕೆಲ ಹಿರಿಯ ಮುಖಂಡರು ಸುರೇಶ್ ಬಾಬು ಪರವಾಗಿ ಕೆಲಸ ಮಾಡಿ, ಮತಗಳನ್ನು ಬಿಜೆಪಿಗೆ ಹಾಕಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಟಿ.ಎಚ್. ಸುರೇಶ್ ಬಾಬು 'ಹ್ಯಾಟ್ರಿಕ್ ಗೆಲುವಿ'ಗಾಗಿ ದಾಪುಗಾಲಿಟ್ಟಂತೆ. ಇನ್ನು ಜೆಡಿಎಸ್ ಅಭ್ಯರ್ಥಿಯ ಆಯ್ಕೆ ಇದುವರೆಗೆ ನಡೆದಿಲ್ಲ.