ರಾಜ್ಯಸಭಾ ಮತದಾನದ ಬಳಿಕ ರಾಜಿನಾಮೆ ನೀಡಲಿದ್ದಾರೆ ರೆಬಲ್ ಶಾಸಕರು
ಬಳ್ಳಾರಿ, ಮಾರ್ಚ್, 22: ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಭೀಮಾನಾಯ್ಕ ಸೇರಿ ಏಳು ಜನ ರೆಬೆಲ್ ಜೆಡಿಎಸ್ ಶಾಸಕರು ಮಾರ್ಚ್ 25ರ ಭಾನುವಾರ ದಂದು ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಶಾಸಕ ಭೀಮಾನಾಯ್ಕ ಅವರೇ ತಿಳಿಸಿದಂತೆ, ಮಾರ್ಚ್ 23ರ ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ನಡೆಸಿ, ಮಾರ್ಚ್ 24 ರ ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮಾರ್ಚ್ 25ರ ಭಾನುವಾರ ಮೈಸೂರಿನ ಕಾಂಗ್ರೆಸ್ ರ್ಯಾಲಿಯಲ್ಲಿ ಪಕ್ಷವನ್ನು ಸೇರಲಿದ್ದಾರಂತೆ.
ಜೆಡಿಎಸ್ ಬಂಡಾಯ ಶಾಸಕರಿಗೆ ತಾತ್ಕಾಲಿಕ ನೆಮ್ಮದಿ
ಜೆಡಿಎಸ್ನ ರೆಬಲ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ, ಅವರವರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೇ, ತಾವು ಜೆಡಿಎಸ್ ಬಿಡಲು ಇದ್ದ ಬಲವಾದ ಕಾರಣಗಳು, ಕಾಂಗ್ರೆಸ್ ಸೇರಿದ್ದರ ಹಿನ್ನಲೆ ಕುರಿತು ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.