ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೆಲೆ ಇಲ್ಲ: ಜಗದೀಶ್ ಶೆಟ್ಟರ್
ಬಳ್ಳಾರಿ, ಏಪ್ರಿಲ್ 25 : ಭಾರತೀಯ ಜನತಾ ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ಮುಂದಿದೆ. ನಾವು ಸ್ಪಷ್ಟ ಬಹುಮತದಿಂದ ಜಯಭೇರಿ ಬಾರಿಸಲಿದ್ದೇವೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು. ದೇಶಪಾಂಡೆ ನಗರದಲ್ಲಿ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಹೈಕಮಾಂಡ್ ಸಿದ್ದರಾಮಯ್ಯಗೆ ಮಣಿದು ಎರಡನೆಯ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿದೆ. ಸಿದ್ದರಾಮಯ್ಯಗೆ ತಮ್ಮದೇ ಕ್ಷೇತ್ರದಲ್ಲಿ ನಿಂತು ಗೆದ್ದು ಬರುವ ವಿಶ್ವಾಸವಿಲ್ಲ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಐದು ವರ್ಷ ಆಳ್ವಿಕೆ ಮಾಡಿದ ಸಿಎಮ್ ಗೆ ನೆಲೆಯಿಲ್ಲ ಎಂದು ಟೀಕಿಸಿದರು.
ಸದ್ಯ ಕಾಂಗ್ರೆಸ್ ಹೈಕಮಾಂಡ್ ಹೈಕಮಾಂಡ್ ಆಗಿ ಉಳಿದಿಲ್ಲ. ಈಗ ಕಾಂಗ್ರೆಸ್ ಹೈಕಮಾಂಡ್ ಅಂದ್ರೆ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಆಶಿರ್ವಾದವೂ ಇಲ್ಲ, ಬನಶಂಕರಿಯ ಆಶೀರ್ವಾದವೂ ಇಲ್ಲ ಅಂತ ವ್ಯಂಗ್ಯವಾಡಿದರು. ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿ, ಕೇಂದ್ರದ ನಿರ್ಧಾರದಂತೆ ಟಿಕೆಟ್ ಕೊಡಲಾಗಿದೆ. ಕೆಲೆವೆಡೆ ಅಸಮಾಧಾನವಿತ್ತು ಅದನ್ನು ಬಗೆಹರಿಸಲಾಗುತ್ತಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳು ಟಿಕೆಟ್ ಹಿಂಪಡೆಯಲಿದ್ದಾರೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಅಂದು ಬಳ್ಳಾರಿ, ಇಂದು ಬಾದಾಮಿ: ಸಿದ್ಧರಾಮಯ್ಯ v/s ಶ್ರೀರಾಮುಲು
ಬಿಜೆಪಿ ವಕ್ತಾರ ಡಾ. ವಾಮನಚಾರ್ಯ ಮಾತನಾಡಿ, ಜನಾರ್ಧನ ರೆಡ್ಡಿಯವರನ್ನು ನಾವು ಎಲ್ಲಿಯೂ ಪ್ರಚಾರಕ್ಕೆ ಕರೆದಿಲ್ಲ. ಅವರು ನಮ್ಮ ಸ್ಟಾರ್ ಪ್ರಚಾರಕರೂ ಅಲ್ಲ. ಪ್ರಚಾರ ಮಾಡುವುದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಯಡಿಯೂರಪ್ಪನವರು ಹೇಳಿಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ನಮ್ಮ ನಾಯಕ ಶ್ರೀರಾಮುಲು ಹೊರತು ಜನಾರ್ದನ ರೆಡ್ಡಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ವಾಮನಾಚಾರ್ಯ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಐದು ವರ್ಷದಿಂದ ಪ್ರಗತಿ ಸ್ಥಗಿತಗೊಂಡಿದೆ. ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟುತ್ತೇವೆಂದು ಹೇಳಿದ್ದರೂ 5 ಜಿಲ್ಲೆಯಲ್ಲಿ ಮಾತ್ರ ಆ ಕೆಲಸವಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದು ಖಚಿತವೆಂದು ಮಾಹಿತಿ ನೀಡಿದರು.