ಭೀಮಾನಾಯ್ಕ ಶಾಸಕ ಸ್ಥಾನಕ್ಕೆ ರಾಜೀನಾಮೆ, ಸಂಭ್ರಮವೋ ಸಂಭ್ರಮ
ಬಳ್ಳಾರಿ, ಮಾರ್ಚ್ 25: ಹಗರಿಬೊಮ್ಮನಹಳ್ಳಿ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಭೀಮಾನಾಯ್ಕ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಸ್ಥಳೀಯ ಪ್ರಗತಿಪರರು, ಬಂಡಾಯ ಸಾಹಿತಿಗಳು, ಜೆಡಿಸ್ ಅಭಿಮಾನಿಗಳು, ವಿವಿಧ ಸಂಘಟನೆಗಳವರು ಪಟ್ಟಣದ ಬಸವ ಪುತ್ಥಳಿ ಬಳಿ ಪಟಾಕಿ ಸಿಡಿಸಿ ಶನಿವಾರ ಸಂಜೆ ಸಂಭ್ರಮ ಪಟ್ಟಿದ್ದಾರೆ.
ಆ ನಂತರ ಭೀಮಾನಾಯ್ಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಭೀಮಾನಾಯ್ಕ್ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದಾಗಿ ಅನೈತಿಕ ರಾಜಕಾರಣ ಅಂತ್ಯವಾದ ಸುದಿನವಾಗಿದೆ ಎಂದು ಪ್ರಗತಿಪರ ಸಂಘಟನೆ, ಬಂಡಾಯ ಸಾಹಿತಿ, ಟಿಪ್ಟು ಸುಲ್ತಾನ್ ಅಭಿಮಾನಿಗಳ ಬಳಗ, ಪಂಚಮಸಾಲಿ ಸಮಾಜದ ಮುಖಂಡ, ಭೀಷ್ಮ ಯುವಕ ಸಂಘಗಳ ಸಹಭಾಗಿತ್ವದಲ್ಲಿ ಸಂಭ್ರಮಾಚರಿಸಲಾಯಿತು.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆ
ಶಾಸಕ ಸ್ಥಾನಕ್ಕೆ ಭೀಮಾನಾಯ್ಕ್ ರಾಜೀನಾಮೆ ನೀಡುತ್ತಿದ್ದಂತೆ ಪ್ರಗತಿಪರರು, ಬಂಡಾಯ ಸಾಹಿತಿಗಳು ಮತ್ತಿತರರು ಇಲ್ಲಿಯ ಪ್ರವಾಸಿ ಮಂದಿರದ ಬಳಿ ಸಿಹಿ ಹಂಚಿ, ಖುಷಿಪಟ್ಟರು.
ಬಂಡಾಯ ಸಾಹಿತಿ, ಹಿರಿಯ ಪತ್ರಕರ್ತರಾದ ಹಿಮ ಗುರುಬಸವರಾಜ್ ಮಾತನಾಡಿ, ಒಂದು ಪಕ್ಷದಿಂದ ಗೆದ್ದು ಆಡಳಿತ ಪಕ್ಷಕ್ಕೆ ಬೇಲಿ ಹಾರುವ ಜಾಯಮಾನವನ್ನೇ ತನ್ನ ರಾಜಕೀಯ ಜೀವನದಲ್ಲಿ ರೂಢಿಸಿಕೊಂಡು ಬಂದಿರುವ ಭೀಮಾನಾಯ್ಕ್ ರಾಜೀನಾಮೆಯಿಂದ ಪ್ರಜಾತಂತ್ರ ವ್ಯವಸ್ಥೆಗೆ ಜಯ ಸಿಕ್ಕಂತಾಗಿದೆ ಎಂದರು.
ಜೆಡಿಎಸ್ ನಿಂದ ಆಯ್ಕೆಯಾಗಿ, ನಂತರದ ದಿನಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುವ ಮೂಲಕ ಈತನನ್ನು ಆಯ್ಕೆ ಮಾಡಿದ ಕಾರ್ಯಕರ್ತರಿಗೆ ದ್ರೋಹ ಎಸಗಿದ್ದಲ್ಲದೇ ಉಂಡ ಮನೆ ಜಂತಿ ಎಣಿಸಿದ್ದು, ಇಡೀ ಕ್ಷೇತ್ರದ ಜನ ಗಮನಿಸಿದ್ದಾರೆ ಎಂದರು.
ಶಾಸಕ ಸ್ಥಾನಕ್ಕೆ ಭೀಮಾ ನಾಯ್ಕನ ರಾಜೀನಾಮೆಯಿಂದ ಕಪ್ಪು ಚುಕ್ಕಿ ಹೊಂದಿದ್ದ ಪ್ರಜಾತಂತ್ರ ವ್ಯವಸ್ಥೆಗೆ ಮತ್ತೆ ಬಲ ಬಂದಂತಾಗಿದೆ. ಇಂತಹ ರಾಜಕಾರಣಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರು ತಕ್ಕ ಬುದ್ಧಿ ಕಲಿಸಲು ಕಾಯುತ್ತಿದ್ದಾರೆ ಎಂದರು.
ಪತ್ರಕರ್ತ ಹುಳ್ಳಿ ಪ್ರಕಾಶ್, ಈ ಹಿಂದೆ ಶಾಸಕರಾಗಿದ್ದ ಸೋಮಪ್ಪ, ಚೆನ್ನಬಸವನಗೌಡ, ನಬೀಸಾಬ್, ಸಿರಾಜ್ ಷೇಖ್, ಅನಿಲ್ ಎಚ್. ಲಾಡ್, ನೇಮಿರಾಜ್ ನಾಯ್ಕ್ ಅವರು ಯಾರೂ ಇಂಥ ಅನೈತಿಕ ರಾಜಕಾರಣ ಮಾಡಲಿಲ್ಲ. ಶಾಸಕನ ರಾಜೀನಾಮೆಯಿಂದ ಕ್ಷೇತ್ರದ ಜನತೆ ಮತ್ತೆ ತಲೆ ಎತ್ತಿ ನಡೆದಾಡುವಂತಾಗಿದೆ ಎಂದು ಹೇಳಿದರು.
ಟಿಪ್ಟು ಸುಲ್ತಾನ್ ಅಭಿಮಾನಿ ಬಳಗದ ಇರ್ಫಾನ್ ಮಾತನಾಡಿದರು. ಪಂಚಮಸಾಲಿ ಸಮಾಜದ ಮುಖಂಡ ಶಿವಶಂಕರ್ ಗೌಡ್, ಭೀಷ್ಮ ಯುವಕ ಸಂಘದ ಉಪಾಧ್ಯಕ್ಷ ಬಾರಿಕರ ಗಂಗಾಧರ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ವಿರೂಪಾಕ್ಷ ಹಂಪಸಾಗರ, ಬ್ರೆಡ್ ನಜೀರ್, ವಕೀಲ ನಿಂಗರಾಜ್, ಉಮೇಶ್, ಪ್ರಹ್ಲಾದ್, ಇಸ್ಮಾಯಿಲ್ ಇತರರು ಇದ್ದರು.
'ಎದೆಹಾಲುಣಿಸಿದ ತಾಯಿಗೆ ದ್ರೋಹ' - ಹೋರಾಟಗಾರರ ಬೆನ್ನು ಚಪ್ಪರಿಸಿದ ವೈ.ಎಸ್.ವಿ.ದತ್ತ
ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ ಸಮಯಕ್ಕೆ ಸರಿಯಾಗಿ ಪಟ್ಟಣಕ್ಕೆ ಆಗಮಿಸಿದ ಜೆಡಿಎಸ್ ಪಕ್ಷದ ವಕ್ತಾರ ಹಾಗೂ ಶಾಸಕ ವೈ.ಎಸ್.ವಿ.ದತ್ತ, ಭೀಮಾನಾಯ್ಕ್ ರಾಜೀನಾಮೆ ನೀಡಿದ್ದನ್ನು ಸಂಭ್ರಮಿಸುತ್ತಿದ್ದವರ ಬೆನ್ನು ಚಪ್ಪರಿಸಿದರು. ಅಲ್ಲದೇ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆಗಳಿಗೆ ಸೂಕ್ತ ಕಾಲ ಎಂದರು.
ಹಾಲುಣಿಸಿದ ತಾಯಿಗೆ ದ್ರೋಹ ಎಸಗಿದ ಕೀರ್ತಿ ಭೀಮಾನಾಯ್ಕನಿಗೆ ಸಲ್ಲುತ್ತದೆ. ಪತ್ರಕರ್ತರು, ಬಂಡಾಯಗಾರರು, ಪ್ರಗತಿಪರರು ರಾಜೀನಾಮೆಯನ್ನು ಸಂಭ್ರಮಿಸುತ್ತಾರೆಂದರೆ ಆ ಶಾಸಕನ ದುರಾಡಳಿತ ಎಷ್ಟಿತ್ತೆಂದು ಸ್ಪಷ್ಟವಾಗುತ್ತದೆ ಎಂದರು.
ತಾಲೂಕಿನ ತಂಬ್ರಹಳ್ಳಿ ಹೋಬಳಿಯಲ್ಲಿ ನಡೆಯುವ ಜೆಡಿಎಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ದತ್ತ, ಬುದ್ಧಿವಂತರನ್ನು ಎದುರು ಹಾಕಿಕೊಂಡು ಬದುಕುವುದು ಸುಲಭ ಎಂದುಕೊಂಡಿರುವ ಭೀಮಾನಾಯ್ಕನಿಗೆ ತಕ್ಕ ಪಾಠ ಕಲಿಸಲು ನಿಮ್ಮ ಕ್ಷೇತ್ರದ ಮತದಾರರನ್ನು ಜಾಗೃತಗೊಳಿಸಿ ಎಂದು ವಿನಂತಿಸಿದರು.
ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಸಂತಸದ ಸಂದೇಶ
ಶಾಸಕ ಭೀಮಾನಾಯ್ಕ್ ರಾಜೀನಾಮೆ ನೀಡುತ್ತಿದ್ದಂತಯೇ ಹಗರಿಬೊಮ್ಮನಹಳ್ಳಿಯ ವಾಟ್ಸಪ್ ಗ್ರೂಪ್ ಗಳಲ್ಲಿ ಸಂತಸ ಹಂಚಿಕೊಂಡ ಕೆಲವರು, 'ನಮ್ಮ ಕ್ಷೇತ್ರಕ್ಕೆ ಒಳ್ಳೆಯ ದಿನ ಬಂತು', 'ಹಗರಿಬೊಮ್ಮನಹಳ್ಳಿಗೆ ಒಳ್ಳೆ ಕಾಲ ಬರಲು 5 ವರ್ಷಗಳ ಕಾಲ ಕಾಯಬೇಕಾಯಿತು', 'ಅಂತೂ ಹಗರಿಬೊಮ್ಮನಹಳ್ಳಿಗೆ ಮುಕ್ತಿ ದೊರೆಯಿತು' ಎನ್ನುವಂತಹ ಮೆಸೇಜ್ ಗಳನ್ನು ಕಳುಹಿಸಿದರು.