ಸ್ಲಂ ವಾಸ್ತವ್ಯ ತೋರಿಕೆಗೆ ಅಲ್ಲ : ಬಿ.ಶ್ರೀರಾಮುಲು
Recommended Video
ಬಳ್ಳಾರಿ, ಫೆಬ್ರವರಿ 11 : 'ನಾವು ಸ್ಲಂ ವಾಸ್ತವ್ಯ ಮಾಡಿರುವುದು ಕೇವಲ ತೋರಿಕೆಗೆ ಅಲ್ಲ. ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಇರುವ ಜನರ ಅಭಿವೃದ್ಧಿ ಮಾಡಲು' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹೇಳಿದರು.
ಶನಿವಾರ ರಾತ್ರಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 16ನೇ ವಾರ್ಡಿನ ಸ್ಲಂ ನಿವಾಸಿ ಮೇನಕಮ್ಮ ಅವರ ನಿವಾಸದಲ್ಲಿ ಶ್ರೀರಾಮುಲು ಅವರು ವಾಸ್ತವ್ಯ ಹೂಡಿದ್ದರು.
ಚಿತ್ರಗಳು : ಲಕ್ಷ್ಮಣ್ ಪುರಿ ಸ್ಲಂನಲ್ಲಿ ಯಡಿಯೂರಪ್ಪ ವಾಸ್ತವ್ಯ
ಈ ಸಂದರ್ಭದಲ್ಲಿ ಶ್ರೀರಾಮುಲು ಅವರು ಮಹಿಳೆಯರು, ಸ್ಲಂ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು. ಶ್ರೀ ಪಾಂಡುರಂಗ ದೇವಸ್ಥಾನ ಬಳಿಯ ಸ್ಲಂ ನಿವಾಸಿಗಳ ಜೊತೆ ಸರಿ ರಾತ್ರಿಯವರೆಗೂ ಬೆರೆತ ರಾಮುಲು ಅವರು ಅಲ್ಲಿಯೇ ರಾತ್ರಿ ಊಟ ಸವಿದರು.
ಜೋಪಡಿಯ ಮನೆಯಲ್ಲಿ ತಮ್ಮ ಕಾರ್ಯಕರ್ತರು ವ್ಯವಸ್ಥೆಗೊಳಿಸಿದ ಹಾಸಿಗೆಯಲ್ಲಿ ನಿದ್ರಿಸಿದರು. ಭಾನುವಾರ ಬೆಳಗ್ಗೆ ಸ್ಲಂ ನಿವಾಸಿಗಳಿಗೆ ಬೆಳಗಿನ ಶುಭಾಶಯ ಹೇಳುತ್ತಲೇ ಮುಖ ತೊಳೆದು, ಕಾಫಿ ಕುಡಿದು ಎಲ್ಲ ಪತ್ರಿಕೆಗಳನ್ನು ಓದಿದರು. ಸ್ಲಂ ವಾಸ್ತವ್ಯದ ಚಿತ್ರಗಳು ಇಲ್ಲಿವೆ......
ಅಹವಾಲು ಸ್ವೀಕಾರ
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರೊಡನೆ ಶ್ರೀರಾಂಪುರ ಕಾಲೋನಿ, ಉಮಾಶಂಕರ ನಗರ, ಮುನಿಸಿಪಲ್ ಬಡಾವಣೆ, ಮಾರ್ಕಂಡೇಯ ಕಾಲೋನಿ, ಇಂದಿರಾ ನಗರದೆಲ್ಲೆಡೆ ಸಂಚರಿಸಿದರು. ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಬಡವರು, ಶ್ರಮಿಕರು, ಪೌರ ಕಾರ್ಮಿಕರ ಜೊತೆ ಬೆರೆತು ಅಹವಾಲು ಆಲಿಸಿದರು.
ಸ್ಲಂ ದುರ್ಭಾಗ್ಯ ಸಂಚಿಕೆ ಬಿಡುಗಡೆ
ಶ್ರೀರಾಮುಲು ಅವರು ಈ ವೇಳೆ 'ಸ್ಲಂ ದುರ್ಭಾಗ್ಯ' ಸಂಚಿಕೆಯನ್ನು ಬಿಡುಗಡೆ ಮಾಡಿದರು. 'ರಾಜ್ಯದಲ್ಲಿ ಒಟ್ಟು 2805 ಸ್ಲಂಗಳಿವೆ. 976 ಸ್ಲಂಗಳನ್ನು ಈಗಾಗಲೇ ಸಮೀಕ್ಷೆ ಮಾಡಲಾಗಿದೆ. 4,15,942 ಮನೆಗಳ ಸಮೀಕ್ಷೆ ನಡೆಸಿ 16,91,9972 ಜನರ ಜೊತೆ ಸಂಪರ್ಕಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 9.19 ಜನರು ಸ್ಲಂನಲ್ಲಿ ವಾಸಿಸುತ್ತಿದ್ದಾರೆ' ಎಂದರು.
ಮೂಲ ಸೌಕರ್ಯ ಸಿಕ್ಕಿಲ್ಲ
'ಬಳ್ಳಾರಿಯ ಸ್ಲಂಗಳ ಪೈಕಿ ಎಸ್.ಸಿ 20.5, ಎಸ್.ಟಿ.5.2, ಓಬಿಸಿ 7.6, ಎಸ್ಸಿ, ಎಸ್ಟಿ, ಓಬಿಸಿ 4.3 ಒಟ್ಟು 39.3 ಶೇಕಡಾವಾರು ಜನರು ವಾಸ ಮಾಡುತ್ತಿದ್ದಾರೆ. 65 ವರ್ಷವನ್ನಾಳಿದ ಕಾಂಗ್ರೆಸ್ ದುರಾಡಳಿತದಿಂದಾಗಿ ಸ್ಲಂ ವಾಸಿಗಳಿಗೆ ಇಂದಿಗೂ ಮೂಲಭೂತ ಸೌಕರ್ಯಗಳು ಲಭಿಸಿಲ್ಲ' ಎಂದು ಶ್ರೀರಾಮುಲು ದೂರಿದರು.
ಸ್ಲಂಗಳ ಅಂಕಿ ಅಂಶ
ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ 9,22, 589 ಜನ ಎಸ್.ಸಿ., 1,72,129 ಜನ ಎಸ್.ಟಿ. ಸೇರಿದಂತೆ ಒಟ್ಟು ರಾಜ್ಯದಲ್ಲಿ 6,10,95,297 ಜನಸಂಖ್ಯೆ ಇದೆ. ಈ ಪೈಕಿ 2,36,25,967 ನಗರವಾಸಿಗಳು, 32,91,434 ಜನ ಸ್ಲಂ ನಿವಾಸಿಗಳು ಸೇರಿ ಒಟ್ಟು ನಗರಗಳ 100 ಜನರಲ್ಲಿ 14 ಜನರು ಸ್ಲಂಗಳಲ್ಲಿ ವಾಸ ಮಾಡಿಕೊಂಡಿದ್ದಾರೆ.
ಮನೆಗಳ ನಿರ್ಮಾಣ
'ಬಳ್ಳಾರಿ ನಗರ, ಹೊಸಪೇಟೆ, ಕಮಲಾಪುರ, ಕಂಪ್ಲಿ, ಸಿರುಗುಪ್ಪ, ತೆಕ್ಕಲಕೋಟೆ, ಕೂಡ್ಲಿಗಿ, ಕೊಟ್ಟೂರು, ಸಂಡೂರು ಮತ್ತು ಹಡಗಲಿಯಲ್ಲಿ ಒಟ್ಟು ಘೋಷಿತ ಸ್ಲಂಗಳಲ್ಲಿ 215050 ಜನರು ಮತ್ತು ಅಘೋಷಿತ ಸ್ಲಂಗಳಲ್ಲಿ 53234 ಜನಸಂಖ್ಯೆ ಇದೆ. ಕೇಂದ್ರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು ಪ್ರಧಾನಮಂತ್ರಿಗಳ ಕನಸಿನ 2 ಕೋಟಿ ಮನೆಗಳನ್ನು 2020ರೊಳಗೆ ನಿರ್ಮಾಣ ಮಾಡುವುದಾಗಿ' ಶ್ರೀರಾಮುಲು ಭರವಸೆ ನೀಡಿದರು.
ಮೂಲ ಸೌಕರ್ಯ ಅಭಿವೃದ್ಧಿ
'ರಾಜ್ಯದ ಸ್ಲಂಗಳಲ್ಲಿ 8 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಒತ್ತಡ ಹೇರಲಾಗುವುದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಲಂಗಳ ಸುಧಾರಣೆ ಜೊತೆಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ''
ಶ್ರೀರಾಮುಲು ಅವರು ಭರವಸೆ ನೀಡಿದರು.