ಬಳ್ಳಾರಿಗೆ ಫೆ.25, 26ರಂದು ಎಚ್ ಡಿ ಕುಮಾರಸ್ವಾಮಿ ಭೇಟಿ
ಬಳ್ಳಾರಿ, ಫೆಬ್ರವರಿ 20 : ಗಣಿನಾಡು ಬಳ್ಳಾರಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ರಾಹುಲ್ ಗಾಂಧಿ, ನಿತಿನ್ ಗಡ್ಕರಿ ಬಳಿಕ ಈಗ ಎಚ್.ಡಿ.ಕುಮಾರಸ್ವಾಮಿ ಬಳ್ಳಾರಿಗೆ ಆಗಮಿಸುತ್ತಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಫೆಬ್ರವರಿ 25 ರಂದು ಕೂಡ್ಲಗಿ, ಕೊಟ್ಟೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಫೆಬ್ರವರಿ 26ರಂದು ಸಂಡೂರಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಬಳ್ಳಾರಿ : ಟಿಕೆಟ್ ಸಿಗುವ ಮೊದಲೇ ಪ್ರಚಾರ ಆರಂಭ!
ಎರಡು ದಿನಗಳ ಕಾಲ ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಪಕ್ಷ ಸಂಘಟನೆ, ಅಭ್ಯರ್ಥಿಗಳ ಹೆಸರು ಅಂತಿಮ, ಚುನಾವಣಾ ಕಾರ್ಯತಂತ್ರದ ಕುರಿತು ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಜಿಲ್ಲಾ ಅಧ್ಯಕ್ಷ ಕುಡತಿನಿ ಶ್ರೀನಿವಾಸ್ ಮತ್ತು ಹೊತ್ತೂರು ಮೊಹಮ್ಮದ್ ಇಕ್ಬಾಲ್ ಆಸಕ್ತಿ ಹೊಂದಿದ್ದಾರೆ. ಸಂಡೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ವಸಂತಕುಮಾರ್, ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು
ಹೊಸಪೇಟೆಯ ವಿಜಯನಗರ ಸಾಮಾನ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಸ್ಪರ್ಧೆ ಮಾಡಲಿದೆ. ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು 8 ರಿಂದ 10 ಅಭ್ಯರ್ಥಿಗಳು ಆಸಕ್ತಿ ತೋರಿದ್ದಾರೆ.
ಫೆಬ್ರವರಿ 25 ರಂದು ಹಗರಿಬೊಮ್ಮನಹಳ್ಳಿಯ ಸ್ಪರ್ಧಾಸಕ್ತ ಅಭ್ಯರ್ಥಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಅವರ ನೂತನ ಗೃಹಪ್ರವೇಶ ಕಾರ್ಯಕ್ರಮ ಮತ್ತು ಅವರು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.