ಹಂಪಿ ಉತ್ಸವಕ್ಕೂ ಮುನ್ನ ತುಂಗಾರತಿ ಉತ್ಸವ ಆಚರಣೆ
ಹೊಸಪೇಟೆ, ಅಕ್ಟೋಬರ್ 29: ಈ ಬಾರಿ ನಡೆಯುವ ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ವತಿಯಿಂದ ಸಾಕಷ್ಟು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಮೂರ್ನಾಲ್ಕು ಕಾರ್ಯಕ್ಕೆ ಚಾಲನೆ ದೊರೆತಿದ್ದು, ಇದಕ್ಕೆ ಮುನ್ನುಡಿ ಎಂಬಂತೆ ತುಂಗಭದ್ರಾ ಆರತಿ ಉತ್ಸವವನ್ನು ಆಚರಣೆ ಮಾಡಲಾಯಿತು.
ಹಂಪಿಯ ಭಾರತಿ ವಿದ್ಯಾರಣ್ಯ ಶ್ರೀಗಳಿಂದ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಆರತಿ ಉತ್ಸವವನ್ನು ಆಚರಣೆ ಮಾಡಲಾಯಿತು. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಪಕ್ಕದಲ್ಲಿರುವ ತುಂಗಭದ್ರಾ ನದಿ ತಟದಲ್ಲಿ ಆರತಿ ಉತ್ಸವ ಆಚರಣೆ ಮಾಡಲಾಗಿದ್ದು, ಆರತಿ ಉತ್ಸವಕ್ಕೆ ಸಾಕಷ್ಟು ಭಕ್ತಾದಿಗಳು ಆಗಮಿಸಿದ್ದರು.
ಇನ್ನೂ ಆರತಿ ಉತ್ಸಾವಕ್ಕೆ ಜಮಾಯಿಸಿದ್ದ ಭಕ್ತರು, ತುಂಗಭದ್ರಾ ನದಿಯಲ್ಲಿ ದೀಪಗಳನ್ನು ತೇಲಿಬಿಡುವ ಮೂಲಕ ಆಚರಣೆ ಮಾಡಿದರು. ಈ ಒಂದು ಉತ್ಸವ ಹಂಪಿ ಉತ್ಸವದಲ್ಲೆ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ತುಂಗಭದ್ರಾ ಆರತಿ ಉತ್ಸಾವವಾಗಿದೆ.
ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್, ಶಾಸಕ ಆನಂದ್ ಸಿಂಗ್ ಭಾಗಿ ಕೂಡ ಭಾಗವಹಿಸಿ ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆದರು.
ಗಂಗಾರತಿಯಂತೆ ತುಂಗಾರತಿಯೂ ಹೆಚ್ಚು ಜನಪ್ರಿಯತೆ ಗಳಿಸಲು ನದಿಯ ಪಾವಿತ್ರ್ಯತೆ ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ. ಈ ಬಗ್ಗೆ ಈಗಾಗಲೇ ಕಾರ್ಯಗಳು ಆರಂಭವಾಗಿವೆ ಎಂದು ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಹೇಳಿದರು.