ಹೊಸಪೇಟೆಯಲ್ಲಿ ಚಲನಚಿತ್ರೋತ್ಸವ ಸಪ್ತಾಹ ಆರಂಭ
ಹೊಸಪೇಟೆ, ನವೆಂಬರ್ 15 : ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಹಾಗೂ ಪ್ರಾದೇಶಿಕ ಚಲನಚಿತ್ರಗಳ ಪ್ರದರ್ಶನ 'ಚಲನಚಿತ್ರೋತ್ಸವ ಸಪ್ತಾಹ' ಹೊಸಪೇಟೆಯ ಮೀರ್ ಆಲಂ ಚಲನಚಿತ್ರಮಂದಿರದಲ್ಲಿ ಇಂದಿನಿಂದ (ನವೆಂಬರ್ 17) ಆರಂಭಗೊಂಡಿತು.
ಚಲನಚಿತ್ರೋತ್ಸವ ಸಪ್ತಾಹಕ್ಕೆ ಶುಕ್ರವಾರ (ನವೆಂಬರ್ 17) ಬೆಳಗ್ಗೆ 8:30ಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೆಂಕೋಬಪ್ಪ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ಅವರು ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಚಲನಚಿತ್ರೋತ್ಸವ ಸಪ್ತಾಹದಲ್ಲಿ ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ.
ಪ್ರತಿನಿತ್ಯ ಬೆಳಗ್ಗೆ 8ರಿಂದ 11ರವರೆಗೆ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಮೊದಲ ದಿನ 2016ನೇ ಸಾಲಿನಲ್ಲಿ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ 'ಅಮರಾವತಿ' ಚಲನಚಿತ್ರ ಪ್ರದರ್ಶಿಸಲಾಯಿತು.
ನ.18 ರಂದು ಅತ್ಯುತ್ತಮ ಜನಪ್ರೀಯ ಮನರಂಜನಾ ಚಿತ್ರ ಪ್ರಶಸ್ತಿಗೆ ಭಾಜನವಾಗಿರುವ 'ಕಿರಿಕ್ ಪಾರ್ಟಿ', ನ.19ರಂದು ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಪ್ರಶಸ್ತಿ ಪಡೆದ ಚಿತ್ರ 'ರಾಮ ರಾಮ ರೇ', ನ.20ರಂದು ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಮತ್ತು ಅತ್ಯುತ್ತಮ ತುಳುಭಾಷಾ ರಾಷ್ಟ್ರ ಪ್ರಶಸ್ತಿ ಪಡೆದ ಮದಿಪು (ತುಳು ಭಾಷೆ) ಚಲನಚಿತ್ರ ಪ್ರದರ್ಶನಗೊಳ್ಳಲಿವೆ.
2016ನೇ ಸಾಲಿನ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ 'ಯೂ ಟರ್ನ್' ಚಿತ್ರ ನ.21 ರಂದು, ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ 'ಅಲ್ಲಮ' ಚಲನಚಿತ್ರ ನ.22ರಂದು, ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದ ಮಾರಿಕೊಂಡವರು ನ.23 ರಂದು ಪ್ರದರ್ಶನಗೊಳ್ಳಲಿವೆ.
ಈ ಚಲನಚಿತ್ರಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಆಗಮಿಸಿ ಈ ಚಲನಚಿತ್ರಗಳನ್ನು ವೀಕ್ಷಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ ಮನವಿ ಮಾಡಿದ್ದಾರೆ.