ತುಂಗಭದ್ರೆಯಿಂದ ಹರಿದ ಹೆಚ್ಚಿನ ನೀರು, ತೇಲಾಡುತ್ತಿವೆ ಹಂಪಿಯ ಸ್ಮಾರಕಗಳು
ಬಳ್ಳಾರಿ, ಜುಲೈ 19 : ತುಂಗಾಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದ್ದು, 22 ಕ್ರೆಸ್ಟ್ ಗೇಟುಗಳನ್ನು ಎರಡು ಅಡಿಗಳಷ್ಟು ತೆರೆದು 63,000 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡುತ್ತಿರುವ ಕಾರಣ, ಹಂಪೆಯ ಕೆಲ ಸ್ಮಾರಕಗಳು ನೀರಿನಲ್ಲಿ ಮುಳುಗಿವೆ.
ಗುರುವಾರ ಸಂಜೆ, 7 ಗಂಟೆಯ ಹೊತ್ತಿಗೆ, ತುಂಗಭದ್ರಾ ನದಿಯ ಪಕ್ಕದ ಹಂಪೆಯ ಸ್ಮಾರಕಗಳಾದ ಪುರಂದರ ಮಂಟಪದ ಗೋಪುರ ಮುಳುಗಿ, ಕೇವಲ ಬಾವುಟ ಹಾರಾಡುತ್ತಿದೆ. ರಾಮ - ಲಕ್ಷ್ಮಣ ದೇವಸ್ಥಾನದವರೆಗೂ ನೀರು ತಲುಪಿವೆ. ಸ್ನಾನಘಟ್ಟ ಸಂಪೂರ್ಣ ಮುಳುಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಣ್ಣಪುಟ್ಟ, ಗುರುತಿಸದ ಸ್ಮಾರಕಗಳು ನೀರಿನಲ್ಲಿ ಮುಳುಗಿವೆ. ನೀರಿನ ಒಳಹರಿವು ಹೆಚ್ಚಿದಲ್ಲಿ ಮತ್ತಷ್ಟು ಸ್ಮಾರಕಗಳು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ.
ಈ ಕಾರಣದಿಂದಾಗಿ 10 ಜನ ಹೋಂಗಾರ್ಡ್ಗಳನ್ನು, 8 ಜನ ಪೊಲೀಸ್ ಸಿಬ್ಬಂದಿಯನ್ನು ನದಿ ದಡದಲ್ಲಿ ನಿಯೋಜಿಸಲಾಗಿದ್ದು, ನಿತ್ಯ ನಸುಕಿನ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಹಂಪಿಯ ಸಿಪಿಐ ಕೆಪಿ ರವಿಕುಮಾರ್ ಅವರು ಹೇಳಿದರು.
ನದಿ ಪ್ರಾಂತ್ಯದ ಗ್ರಾಮಸ್ಥರು, ತೆಪ್ಪ - ಬೋಟು ಚಾಲಕರು, ಮೀನುಗಾರರಿಗೆ ನದಿ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಸಿಗರು ಹರಿಯುವ ನೀರಿಗೆ ಆಕರ್ಷಿತರಾಗಿ, ನದಿಗೆ ಇಳಿಯದಂತೆ ಎಚ್ಚರವಹಿಸಿ, ಅವರನ್ನು ತಡೆಯಲಿಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಅವರು, ನದಿಪಾತ್ರದ ಜನರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಲು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನದಿಪಾತ್ರದ ತಹಶೀಲ್ದಾರರು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೊಸಪೇಟೆ, ಕಂಪ್ಲಿ ಮತ್ತು ಸಿರಗುಪ್ಪ ತಾಲೂಕುಗಳ ತಹಶೀಲ್ದಾರರು ಮತ್ತು ಸಿಬ್ಬಂದಿಯು ಯಾವುದೇ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದವಾಗಿರಲು ಸೂಚನೆ ನೀಡಲಾಗಿದೆ.