ಬಳ್ಳಾರಿ: ವಲಸೆ ಹಕ್ಕಿ ಭೀಮಾನಾಯ್ಕಗೆ ಟಿಕೆಟ್ ಖಾತ್ರಿ ಇಲ್ಲ
ಬಳ್ಳಾರಿ, ಏಪ್ರಿಲ್. 03 : ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ, ಜೆಡಿಎಸ್ನಿಂದ ಜಿಗಿದು, ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಭೀಮಾನಾಯ್ಕ ಅವರು ಅತಂತ್ರರಾಗಿದ್ದಾರೆ.
ಭೀಮಾನಾಯ್ಕ್ ಅವರಿಗೆ ಟಿಕೆಟ್ ನೀಡುವಲ್ಲಿ ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು 'ಸಾಮಾಜಿಕ ನ್ಯಾಯ ನೀತಿ ಪಾಲನೆ' ಮಾಡುವುದಾಗಿ ಹೇಳಿದ್ದೇ ತಡ, ತೀವ್ರ ಆತಂಕಕ್ಕೆ ಒಳಗಾದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಸಮಸ್ಯೆಯನ್ನು ಹೈಕಮಾಂಡ್ ಹಂತದಲ್ಲೇ ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿ ದೆಹಲಿಗೆ ದಿಢೀರನೆ ಹಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಿರುವ ಏಳು ಶಾಸಕರಿಗೆ ಟಿಕೇಟ್ ನೀಡುವ ಕುರಿತು ನಡೆದ ಚರ್ಚೆಯಲ್ಲಿ ಬಳ್ಳಾರಿ ಜಿಲ್ಲೆಯಿಂದ ಜಿಗಿದ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಭೀಮಾನಾಯ್ಕ ಅವರಿಗೆ ಟಿಕೇಟ್ ನೀಡುವಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಹಗರಿ ಬೊಮ್ಮನಹಳ್ಳಿ : ಲಿಂಗಾಯತ, ಲಂಬಾಣಿ ಮತಗಳು ನಿರ್ಣಾಯಕ
ಮಾತುಕತೆಯ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು 'ಹೂವಿನಹಡಗಲಿ ವಿಧಾನಸಭಾ ಕ್ಷೇತ್ರವೂ ಎಸ್ಸಿಗೆ ಮೀಸಲಾಗಿದ್ದು, ಎಸ್ಸಿ ಪಟ್ಟಿಯ ಲಂಬಾಣಿ ಜನಾಂಗದ ಪಿ.ಟಿ. ಪರಮೇಶ್ವರನಾಯ್ಕ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಲಾಗುತ್ತದೆ.
ಪಿಟಿಪಿ ಹಾಲಿ ಕಾಂಗ್ರೆಸ್ ಶಾಸಕರು, ಕಟ್ಟಾ ಕಾಂಗ್ರೆಸ್ ಬೆಂಬಲಿಗರು, ಮಾಜಿ ಸಚಿವರು. ಪರಿಸ್ಥಿತಿ ಹೀಗಿರುವಾಗ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಎಸ್ಸಿಗಳು (ಎಡಗೈ - ಬಲಗೈ) ಸಂಖ್ಯೆ ಹೆಚ್ಚಿರುವ ಕಾರಣ ಸೋಲು - ಗೆಲುವುಗಳ ಲೆಕ್ಕಾಚಾರಕ್ಕಿಂತಲೂ ಪಕ್ಷಕ್ಕೆ ಸಾಮಾಜಿಕ ನ್ಯಾಯ ನೀತಿಯ ಪಾಲನೆ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಭೀಮಾನಾಯ್ಕ ಅವರಿಗೆ ಟಿಕೇಟ್ ಗ್ಯಾರಂಟಿ ಇಲ್ಲ' ಎಂದು ಏರುಧ್ವನಿಯಲ್ಲಿ ಹೇಳಿಯೇಬಿಟ್ಟರು.
ಸಭೆಯಲ್ಲಿದ್ದ ಸಂತೋಷ್ ಎಸ್. ಲಾಡ್, ಮುಖಂಡರನ್ನು ಸಮಜಾಯಿಸಲು ಸಾಕಷ್ಟು ಪ್ರಯತ್ನಪಟ್ಟರೂ, ಯಶಸ್ಸು ಸಾಧಿಸಲಿಲ್ಲ. ನನ್ನ ನೇತೃತ್ವದಲ್ಲಿ, ರಾಹುಲ್ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರಿದವರಿಗೇ ಹೀಗಾದಲ್ಲಿ ಹೇಗೆ? ಎಂದು ಪ್ರಶ್ನಿಸಿದ ಲಾಡ್, ಸಮಾಧಾನದ ಉತ್ತರ ಪಡೆಯಲಿಲ್ಲ. ಏಕಾಏಕಿ ಉಂಟಾದ ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡ ಸಂತೋಷ್ ಲಾಡ್, 'ಈ ಸಮಸ್ಯೆಗೆ ಏಐಸಿಸಿ ವರಿಷ್ಠರಲ್ಲಿ ಇತ್ಯರ್ಥ ಕಂಡುಕೊಳ್ಳುವ. ಭೀಮಾನಾಯ್ಕನಿಗೆ ಟಿಕೇಟ್ ಗ್ಯಾರೆಂಟಿ ಮಾಡಿಕೊಂಡು ಬರುವೆ' ಎನ್ನುತ್ತಲೇ ದೆಹಲಿಗೆ ಹಾರಿಯೇಬಿಟ್ಟರು.
ಭೀಮಾನಾಯ್ಕ ಶಾಸಕ ಸ್ಥಾನಕ್ಕೆ ರಾಜೀನಾಮೆ, ಸಂಭ್ರಮವೋ ಸಂಭ್ರಮ
ಆದರೆ, ಭೀಮಾನಾಯ್ಕ, ಕ್ಷೇತ್ರದಲ್ಲಿ ಸಂಚರಿಸುತ್ತ, ತನಗೇ ಟಿಕೇಟ್ ಎನ್ನುವ ಖಾತರಿಯಲ್ಲಿ ಮುಖಂಡರನ್ನು ಭೇಟಿ ಮಾಡುತ್ತಲೇ ಇದ್ದಾರೆ. ಕೊಟ್ಟೂರೇಶ್ವರನಿಗೆ ಹೊಸ ತೇರು ನಿರ್ಮಾಣಕ್ಕೆ 2 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಿಸಿದ್ದು, ಮಾಲ್ವಿ ಜಲಾಶಯದಲ್ಲಿ ನೀರು ಸಂಗ್ರಹ ಮಾಡಿದ್ದು, ಅಭಿವೃದ್ಧಿಗೆ ಅನುದಾನ ತಂದಿದ್ದನ್ನು ಪ್ರಚಾರದ ಸರಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.