ಬಳ್ಳಾರಿಯಲ್ಲಿ ಲೋಟಸ್ ಮಹಲ್ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣ
ಬಳ್ಳಾರಿ, ಆಗಸ್ಟ್.14: ಹಂಪೆಯ ವಿರೂಪಾಕ್ಷೇಶ್ವರನ ರಾಜಗೋಪುರ ಮತ್ತು ಲೋಟಸ್ ಮಹಲ್ ಹೋಲುವ ರೀತಿಯಲ್ಲೇ ಬಳ್ಳಾರಿಯಲ್ಲಿ ಜಿಲ್ಲಾಡಳಿತ ಭವನ' ನಿರ್ಮಾಣಗೊಳ್ಳುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಭೂಮಿಪೂಜೆ ನೆರವೇರಿಸಲಿದ್ದಾರೆ.
25 ಕೋಟಿ ರೂಪಾಯಿ ವೆಚ್ಚದಲ್ಲಿ 17.13 ಎಕರೆ ಭೂಮಿಯಲ್ಲಿ ಡಾ. ರಾಜಕುಮಾರ್ ರಸ್ತೆಯಲ್ಲಿ ಇರುವ ಸರ್ಕಾರಿ ಇನ್ಪೆಕ್ಷನ್ ಬಂಗ್ಲಾದ ಆವರಣದಲ್ಲಿಯೇ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ.
ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?
ಈ ಕಟ್ಟಡ ನಿರ್ಮಾಣವಾದಲ್ಲಿ ಕರ್ನಾಟಕ ಸರ್ಕಾರದ 40 ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದು, ನಾಗರಿಕರ ಅನೇಕ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗಲು ನೆರವಾಗಲಿದೆ ಎಂದೇ ಅಂದಾಜಿಸಲಾಗಿದೆ.
ಕಟ್ಟಡವು 13.5 ಮೀಟರ್ ಎತ್ತರ ಹೊಂದಿದ್ದು, ನೆಲಮಹಡಿ ಸೇರಿ ಒಟ್ಟು ಮೂರು ಅಂತಸ್ತುಗಳನ್ನು ಹೊಂದಿರುತ್ತದೆ. ಪ್ರತಿ ಅಂತಸ್ತಿನಲ್ಲೂ 100 ಜನರು ಸಭೆ ಸೇರಬಹುದಾದ ಸಭಾಂಗಣವನ್ನು ನಿರ್ಮಾಣ ಮಾಡಲಾಗುತ್ತದೆ. ಕಟ್ಟಡವು ಹಸಿರು ಕಟ್ಟಡ (ಗ್ರೀನ್ ಬಿಲ್ಡಿಂಗ್) ಕಾನ್ಸೆಪ್ಟ್ ನಲ್ಲಿ ನಿರ್ಮಾಣಗೊಳ್ಳಲಿದೆ.
ಕಟ್ಟಡವು ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನ, ಸುರಕ್ಷತಾ ಸೌಲಭ್ಯಗಳು ಮತ್ತು ಸಿಸಿ ಕ್ಯಾಮರಾ, ಸ್ವಯಂಚಾಲಿತ ಸೌರ ದೀಪಗಳ ವ್ಯವಸ್ಥೆ, ಇನ್ನಿತರೆ ಸೌಲಭ್ಯಗಳನ್ನು ಹೊಂದಿದ್ದು, ಕರ್ನಾಟಕ ಗೃಹ ಮಂಡಳಿಯು ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ನಿರ್ವಹಿಸಲಿದೆ.
ಹಂಪಿಯ ಸ್ಮಾರಕಗಳ ಸೊಬಗು ಸಾರುವ ರೀತಿಯಲ್ಲಿ ಕಚೇರಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸಗೊಳಿಸಲಾಗಿದೆ. ಮೇಲ್ಭಾಗದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಪ್ರತಿರೂಪ ಸೃಷ್ಟಿಸುವ ನೀಲನಕ್ಷೆ ವಿನ್ಯಾಸಗೊಳಿಸಲಾಗಿದೆ.
ಹೊರಾಂಗಣ ಪೂರ್ಣಲೋಟಸ್ ಮಹಲ್ ಮಾದರಿಯಲ್ಲಿದ್ದು ಮುಂಭಾಗದಲ್ಲಿ ವಿಶಾಲ ಉದ್ಯಾನವನ, ನೀರಿನ ಕಾರಂಜಿ ಹಾಗೂ ಹಂಪಿ ಸಂಬಂಧಿತ ಇನ್ನಿತರ ಸ್ಮಾರಕಗಳ ಶೈಲಿಯ ಕಟ್ಟಡ ನಿರ್ಮಿಸಲು ವಿನ್ಯಾಸ ರೂಪಿಸಲಾಗಿದೆ.
ಈ ಕಟ್ಟಡ ಆದಷ್ಟು ಶೀಘ್ರವಾಗಿ ತಲೆಎತ್ತಲಿದ್ದು, ಬಳ್ಳಾರಿ ಜಿಲ್ಲಾಡಳಿತ ಭವನದಲ್ಲಿಯೇ ಹಂಪಿಯ ಸ್ಮಾರಕಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಈ ಕಟ್ಟಡ ಜಿಲ್ಲೆಗೆ ಮತ್ತಷ್ಟು ಮೆರಗು ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ. ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.