ರಾಹುಲ್ ಗಿಂತ ಸೊಗಸಾಗಿ ಭಾಷಣ ಒಪ್ಪಿಸಿದ ದಿನೇಶ್
ಹೊಸಪೇಟೆ, ಫೆಬ್ರವರಿ 10 : ಹೊಸಪೇಟೆಯ ಮುನ್ಸಿಪಾಲಿಟಿ ಮೈದಾನದಲ್ಲಿ ನೆರೆದಿದ್ದ ಜನರಲ್ಲಿ ಎಷ್ಟು ಜನರಿಗೆ ರಾಹುಲ್ ಗಾಂಧಿ ಭಾಷಣ ಅರ್ಥವಾಯಿಯೋ, ಮೆಚ್ಚುಗೆಯಾಯಿಯೋ ಗೊತ್ತಿಲ್ಲ. ಆದರೆ, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ದಿನೇಶ್ ಗುಂಡೂ ರಾವ್ ಮಾತುಗಳು ತುಂಬಾ ಸೊಗಸಾಗಿದ್ದವು.
ಕೆಲವೊಂದು ಸಂಗತಿಗಳನ್ನು ರಾಹುಲ್ ಗಾಂಧಿಯವರು ಉಲ್ಲೇಖಿಸದಿದ್ದರೂ, ಕನ್ನಡಕ್ಕೆ ರೂಪಾಂತರಿಸುವಾಗ ದಿನೇಶ್ ಗೂಂಡೂ ರಾವ್ ಅವರು ಹಿಡನ್ ಸಂಗತಿಗಳನ್ನು ಕೂಡ ಅತ್ಯಂತ ಸ್ಪಷ್ಟವಾಗಿ ಹೇಳಿ, ಅಲ್ಲಿ ನೆರೆದಿದ್ದ ಜನರಿಗೆ ಮತ್ತು ನಾಯಕರಿಗೆ ಅಚ್ಚರಿ ಮೂಡಿಸಿದರು.
In Pics : ಹೊಸಪೇಟೆಯಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ
ಕನ್ನಡ ಮಾತನಾಡಲು, ಅರ್ಥವಾಗದ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಭಾಷಣ ಮಾಡಲು ಬಂದಾಗ, ಅವರ ಭಾಷಣ ಕೇಳುವುದಕ್ಕಿಂತ ಅದನ್ನು ಎಷ್ಟು ಪರಿಣಾಮಕಾರಿಯಾಗಿ, ಹಿಂದಿ ಗೊತ್ತಿಲ್ಲದ ಜನರಿಗೆ ಮುಟ್ಟಿಸುತ್ತೇವೆ ಎಂಬುದು ಎಲ್ಲಕ್ಕಿಂತ ಮುಖ್ಯವಾದದ್ದು.
ಇಲ್ಲಿನ ಹಲವಾರು ಕಾಲೇಜು ಹುಡುಗ ಹುಡುಗಿಯರಿಗೆ, ವಿದ್ಯಾವಂತರಿಗೆ, ಬುದ್ಧಿವಂತರಿಗೆ, ಬುದ್ಧಿಜೀವಿಗಳಿಗೆ, ಕನ್ನಡಿಗರಾಗಿದ್ದೂ ಕನ್ನಡ ಬೇಡವಾದವರಿಗೆ ಹಿಂದಿಯನ್ನು ಕೇಳಿದ ಕೂಡಲೆ ಕಿವಿ ಅರಳುತ್ತವಾದರೂ, ಇಲ್ಲಿನ ಬಡಜನರಿಗೆ, ಶ್ರಮಿಕ ವರ್ಗಕ್ಕೆ, ಕನ್ನಡ ಪ್ರೇಮಿಗಳಿಗೆ ಹಿಂದಿ ಎಷ್ಟರ ಮಟ್ಟಿಗೆ ಅರ್ಥವಾಗುತ್ತದೆ?
ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ
ಈ ಕಾರಣದಿಂದ ರಾಷ್ಟ್ರೀಯ ನಾಯಕರು ಮಾಡುವ ಹಿಂದಿ ಭಾಷಣವನ್ನು ಕನ್ನಡಕ್ಕೆ ಸಮರ್ಥವಾಗಿ ತರ್ಜುಮೆ ಮಾಡಿ, ಜನರಿಗೆ ತಲುಪಿಸುವುದು ಸ್ತುತ್ಯರ್ಹವಾದದ್ದು ಮತ್ತು ಸ್ಥಳದಲ್ಲಿಯೇ ತರ್ಜುಮೆ ಮಾಡುವುದು ನಿಜಕ್ಕೂ ಸವಾಲಿನದ್ದು. ಹಿಂದಿ ಭಾಷಣವನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಅನರ್ಥವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
ಫೆಬ್ರವರಿ 4ರಂದು ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಒಂದು ಗಂಟೆಗೂ ಹೆಚ್ಚು ಕಾಲ ಹಿಂದಿಯಲ್ಲಿ ಸುದೀರ್ಘ ಭಾಷಣ ಮಾಡಿದಾಗ, ಅದನ್ನು ಯಾವ ಸ್ಥಳೀಯ ಬಿಜೆಪಿ ನಾಯಕರೂ ತರ್ಜುಮೆ ಮಾಡಿರಲಿಲ್ಲ. ಮಾಡುವ ಅಗತ್ಯವಿಲ್ಲ, ನನ್ನ ಮನ್ ಕಿ ಬಾತ್ ಜನರಿಗೆ ಅರ್ಥವಾಗುತ್ತದೆ ಎಂದು ಮೋದಿಯವರೇ ಹೇಳಿರಬಹುದೇನೋ! ಆದರೆ, ಕನ್ನಡಕ್ಕೆ ಯಾಕೆ ತರ್ಜುಮೆ ಮಾಡಿಸಲಿಲ್ಲ ಎಂದು ಅಸಮಾಧಾನ ಕೂಡ ಕೆಲವರು ವ್ಯಕ್ತಪಡಿಸಿದ್ದರು.
ಢೋಂಗಿ ಮಾತನಾಡುವ ಮೋದಿ ಪಕ್ಷದಲ್ಲಿ ಹೆಗಡೆಯಂಥ ನಾಲಾಯಕ್: ಸಿದ್ದರಾಮಯ್ಯ
ವಸ್ತುಸ್ಥಿತಿ ಹೀಗಿರುವಾಗ, ಹೊಸಪೇಟೆಯಲ್ಲಿ ರಾಹುಲ್ ಗಾಂಧಿಯವರು ಮುಕ್ಕಾಲು ಗಂಟೆ ಮಾಡಿದ ಭಾಷಣವನ್ನು ಅತ್ಯಂತ ಸಮರ್ಥವಾಗಿ ಮತ್ತು ರಾಹುಲ್ ಅವರಿಗಿಂತಲೂ ಪರಿಣಾಮಕಾರಿ ಜನರಿಗೆ ಮುಟ್ಟಿಸಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಷ್ಟ್ರೀಯ ವಕ್ತಾರ ದಿನೇಶ್ ಗುಂಡೂ ರಾವ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
ಕೆಲವು ಕಡೆಗಳಲ್ಲಿ ರಾಹುಲ್ ಗಾಂಧಿಯವರು ಹೇಳಿದ್ದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ಮೂಲ ಭಾಷಣಕ್ಕಿಂತಲೂ ಸ್ಪಷ್ಟವಾಗಿ ಜನರಿಗೆ ಮುಟ್ಟಿಸುವಲ್ಲಿ ದಿನೇಶ್ ಗುಂಡೂ ರಾವ್ ಅವರು ಯಶಸ್ವಿಯಾದರು. ತಾವು ಹೇಳಿದ್ದಕ್ಕಿಂತ ಹೆಚ್ಚಿನ ವಿಚಾರಗಳನ್ನು, ಮಾಹಿತಿಗಳನ್ನು ಇವರು ಹೇಳುತ್ತಿದ್ದಾರಲ್ಲ ಎಂದು ರಾಹುಲ್ ಅವರು ಕೂಡ ಅಚ್ಚರಿಪಟ್ಟಿರಬೇಕು.
ಅಲ್ಲಲ್ಲಿ ತುಸು ಗೊಂದಲಗಳು ಕಂಡುಬಂದರೂ, ಒಂದೆರಡು ಕಡೆ ರಾಹುಲ್ ಹೇಳಿದ್ದು ಅರ್ಥವೇ ಆಗದಿದ್ದರೂ, ಹಲವಾರು ಕಡೆ ಹೇಳಿದ್ದನ್ನೇ ರಾಹುಲ್ ಅವರು ಹೇಳುತ್ತಿದ್ದರೂ, ದಿನೇಶ್ ಗುಂಡೂ ರಾವ್ ಅವರು ಆಭಾಸಗಳಿಗೆ ಅವಕಾಶ ಮಾಡಿಕೊಡದೆ, ನೆರೆದಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಭಾಷಣವನ್ನು ಒಪ್ಪಿಸಿದ್ದಾರೆ.