ಸುಳ್ಳು ದಾಖಲೆ ನೀಡಿದ್ದಕ್ಕೆ ಹೋಯ್ತು ಜಿ.ಪಂ ಅಧ್ಯಕ್ಷ ಸ್ಥಾನ
ಬಳ್ಳಾರಿ, ನವೆಂಬರ್ 04 : ಸುಳ್ಳು ದಾಖಲೆ ನೀಡಿ ಮಹಿಳೆಯೊಬ್ಬಾಕೆ ತನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನೇ ಕಳೆದುಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರ ಕೆಲಸದಿಂದ ಕಿತ್ತುಬಿಸಾಡಿ: ಕೇಂದ್ರ
ಸುಳ್ಳು ದಾಖಲೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸಿ.ಭಾರತಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ತೀರ್ಪನ್ನು ವಿಭಾಗೀಯ ಪೀಠ ಸೋಮವಾರ (ಡಿಸೆಂಬರ್ 04) ಎತ್ತಿಹಿಡಿದಿದೆ.
ತಮ್ಮ ಆದಾಯ ಹೆಚ್ಚಿದ್ದರೂ, ಆದಾಯ ತೆರಿಗೆ ಪಾವತಿಸುತ್ತಿದ್ದರೂ ಅದನ್ನು ಮರೆ ಮಾಚಿ, ತಾವು ಹಿಂದುಳಿದ ವರ್ಗ ಬಿ ವರ್ಗಕ್ಕೆ ಸೇರಿದವರೆಂದು ಕುರುಗೋಡು ಉಪ ತಹಶಿಲ್ದಾರ್ ಅವರಿಂದ ಸುಳ್ಳು ಆದಾಯ ಪ್ರಮಾಣಪತ್ರ ಪಡೆದು ಭಾರತಿ ಅಧ್ಯಕ್ಷರಾಗಿದ್ದಾರೆ ಎಂದು ಸಿದ್ದಪ್ಪ ಎಂಬುವರು ಆಕ್ಷೇಪಣೆ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಹೈಕೋರ್ಟ್ ತೀರ್ಪಿನ ವಿರುದ್ಧ ಭಾರತಿ ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸ್ಪಂದಿಸಿ ಸುಪ್ರೀಂ ಕೋರ್ಟ್, ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ಅಲ್ಲಿಯೇ ಬಗೆಹರಿಸಿಕೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ತೀರ್ಪು ಪ್ರಕಟವಾಗಿದೆ.
ಭಾರತಿ ಅವರನ್ನು ಪದಚ್ಯುತಗೊಳಿಸಿರುವ ನ್ಯಾಯಾಲಯ ಸುಳ್ಳು ಆದಾಯ ಪ್ರಮಾಣಪತ್ರ ನೀಡಿದ ಉಪ ತಹಶಿಲ್ದಾರ್ ಸುರೇಶ್ ಅವರನ್ನು ಅಮಾನತು ಮಾಡಲು ಸೂಚಿಸಿದೆ. ವಿಪರ್ಯಾಸವೆಂದರೆ ಇಂದು (ಡಿಸೆಂಬರ್ 04) ಜಿ.ಪಂ ಸಾಮಾನ್ಯ ಸಭೆಯಲ್ಲಿ ಭಾರತಿ ಅಧ್ಯಕ್ಷತೆ ವಹಿಸಿದ್ದಾರೆ. ಸಭೆ ಮುಗಿಯುವಷ್ಟರಲ್ಲಿ ತೀರ್ಪು ಹೊರಬಿದ್ದು ಅಧ್ಯಕ್ಷ ಸ್ಥಾನ ಕೈಜಾರಿದೆ. ಭಾರತಿ ರೆಡ್ಡಿ ಬಿಜೆಪಿಯಿಂದ ಬಳ್ಳಾರಿ ತಾಲೂಕಿನ ಬಾದನಹಟ್ಟಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು.