ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣ ಶಿಥಿಲ: ಸ್ಥಳೀಯರಲ್ಲಿ ಆತಂಕ
ಬಳ್ಳಾರಿ, ಜುಲೈ. 18: ಕಂಪ್ಲಿ ಮತ್ತು ಗಂಗಾವತಿ ಸಂಪರ್ಕಿಸುವ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹ ಆದಂತೆಲ್ಲಾ ಈ ಸೇತುವೆ ಮೇಲೆ ಸಂಚರಿಸುವವರಿಗೆ ಆತಂಕ ತಪ್ಪಿದ್ದಲ್ಲ.
ಹೈದರಾಬಾದ್ - ಕರ್ನಾಟಕದ ಸಂಪರ್ಕಕೊಂಡಿ ಆಗಿರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯನ್ನು ಸಂಪರ್ಕ ಮಾಡುವ ಈ ಸೇತುವೆಯನ್ನು 57 ವರ್ಷಗಳ ಹಿಂದೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಒಡೆದು ಹೋದ ಬೆಳಗಾವಿಯ ತಿಲೋಲಿ ಸೇತುವೆ: ಹಳ್ಳಿಗಳ ಸಂಪರ್ಕ ಕಡಿತ
1962 ಮತ್ತು 1992 ರಲ್ಲಿ ಸುಮಾರು ಮೂರು ಲಕ್ಷ ಕ್ಯೂಸೆಕ್ಸ್ ನೀರು ಸೇತುವೆಯ ಮೇಲೆ ಹರಿದು ಬಂದು ನದಿ ಪಾತ್ರದ ಕೋಟೆ ಪ್ರದೇಶ ಬಹುತೇಕ ದ್ವೀಪವಾಗಿತ್ತು. 2013ರಲ್ಲಿ ಎಂಟು ದಿನ, 2014ರಲ್ಲಿ ಎರಡು ಬಾರಿ ಸೇತುವೆ ಮುಳುಗಿತ್ತು.
ನಂತರ ಸಮಪರ್ಕವಾಗಿ ಮಳೆಯಾಗದೇ ನದಿಗೆ ನೀರು ಬರಲಿಲ್ಲ, ಸೇತುವೆಯೂ ಮುಳಗಲಿಲ್ಲ, ಆದರೆ ಈ ವರ್ಷ ಅವಧಿಗೂ ಮುನ್ನವೇ ಜಲಾಶಯ ತುಂಬುವ ಹಂತದಲ್ಲಿದ್ದು, ಈ ವರ್ಷ ಸೇತುವೆ ಮುಳುಗುವಷ್ಟು ನೀರು ಹರಿಯಬಹುದೆಂದು ನಿರೀಕ್ಷಿಸಲಾಗಿದೆ.
2 ವರ್ಷದಲ್ಲಿ ನಿರ್ಮಾಣವಾಯ್ತು ಸೇತುವೆ
1959 ಫೆಬ್ರವರಿ 17ರಂದು ಮೈಸೂರು ಸರ್ಕಾರದ ಲೋಕೋಪಯೋಗಿ ಮತ್ತು ವಿದ್ಯುತ್ಚ್ಛಕ್ತಿ ಸಚಿವ ಎಚ್.ಎಂ. ಚನ್ನಬಸಪ್ಪ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಕೇವಲ 18 ಲಕ್ಷ, 71ಸಾವಿರ ರೂ.ಗಳ ವೆಚ್ಚದಲ್ಲಿ 1,934 ಅಡಿ ಉದ್ದದ 22 ಅಡಿ ಅಗಲದ ಸೇತುವೆಯನ್ನು 38 ಅಡಿಯ 51 ಕಮಾನುಗಳ ಮೂಲಕ ಸೇತುವೆಯನ್ನು 2 ವರ್ಷದಲ್ಲಿ ನಿರ್ಮಿಸಲಾಗಿದೆ.
1961ರಲ್ಲಿ ಮೈಸೂರು ಸರ್ಕಾರದ ಲೋಕೋಪಯೋಗಿ ಮತ್ತು ವಿದ್ಯುತ್ಚ್ಚಕ್ತಿ ಸಚಿವರಾದ ಎಚ್.ಕೆ. ವೀರನಗೌಡ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು.
ಜಲಾಶಯ ತುಂಬಲು 5-6 ಅಡಿ ಬಾಕಿ
ತುಂಗಭದ್ರಾ ಜಲಾಶಯ ತುಂಬಲು ಕೇವಲ 5-6 ಅಡಿ ನೀರಿನ ಅಗತ್ಯವಿದೆ. ಹಾಗೇನಾದರೂ ನೀರು ತ್ವರಿತವಾಗಿ ದೊಡ್ಡ ಪ್ರಮಾಣದಲ್ಲಿ ಹರಿದುಬಂದು ಜಲಾಶಯವನ್ನು ಸೇರಿದಲ್ಲಿ ತುಂಗಭದ್ರಾ ಮಂಡಳಿಯ ಅಧಿಕಾರಿಗಳು 32 (ಎಲ್ಲಾ ಕ್ರೆಸ್ಟ್ ಗೇಟು) ಗೇಟುಗಳನ್ನು ಒಟ್ಟಿಗೇ ತೆರೆದು, ಒಂದು ಲಕ್ಷ ಕ್ಯುಸೆಕ್ ಗಿಂತಲೂ ಹೆಚ್ಚಿನ ಪ್ರಮಾಣದ ನೀರು ನದಿಯಲ್ಲಿ ಹರಿದಲ್ಲಿ ಸೇತುವೆ ನೀರಿನಲ್ಲಿ ಮುಳುಗಡೆ ಆಗಿ ಸಂಚಾರ ಸ್ಥಗಿತಗೊಳ್ಳಲಿದೆ.
ಸೇತುವೆಯ ಸಾಮರ್ಥ್ಯ ಕ್ಷೀಣ
ಸೇತುವೆಯ ವಿಸ್ತರಣಾ ಸೇರ್ಪಡೆ ಕೊಂಡಿಗಳು ಸಡಿಲವಾಗಿವೆ. ಜಾಯಿಂಟ್ ಗಳು ಸಡಿಲವಾಗಿ ಕಬ್ಬಿಣದ ಬಾರ್ ಗಳು, ಲಿಂಕ್ಸ್ ಗಳು ತುಂಡಾಗಿ, ಕಾಂಕ್ರೀಟ್ ಕಿತ್ತು ಹೋಗಿವೆ. ಸೇತುವೆಯ ಮೇಲಿನ ಕಾಂಕ್ರೀಟ್ ಅಲ್ಲಲ್ಲಿ ಕಿತ್ತು ಹೋಗಿದ್ದು, ರಕ್ಷಣ ಕಂಬಗಳು ಮಾಯವಾಗಿದ್ದವು.
ಕಳೆದ ಎರಡು ವರ್ಷಗಳ ಹಿಂದೆ ಸೇತುವೆ ದುರಸ್ತಿಗೊಳಿಸಿ ರಕ್ಷಣಾ ಕಂಬಗಳನ್ನು ಹಾಕಿ ಸೇತುವೆಯನ್ನು ಬಲಪಡಿಸಲಾಗಿತ್ತು. ಈ ಕಂಬಗಳಿಗೂ ವಾಹನಗಳು ಡಿಕ್ಕಿ ಹೊಡೆದು ಪುನಃ ಶಿಥಿಲಗೊಂಡಿದೆ.
57 ವರ್ಷಗಳ ಹಳೆಯ ಸೇತುವೆ ದಿನೇ ದಿನೇ ಶಿಥಿಲಾವಸ್ಥೆಯತ್ತ ಸಾಗುತ್ತಿದ್ದು, ಪ್ರತಿವರ್ಷ ಸೇತುವೆ ಮುಳುಗಿ ಸೇತುವೆಯ ಸಾಮರ್ಥ್ಯ ಕ್ಷೀಣಿಸುತ್ತಾ ಬಂದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಭರವಸೆ ಕೊಟ್ಟ ಶಾಸಕರು
ನಿಗದಿತ ಭಾರಕ್ಕಿಂತ ಅಧಿಕ ಭಾರದ ವಾಹನಗಳು ಹಗಲಿರುಳು ಸಂಚರಿಸುತ್ತಿರುವುದರಿಂದ ಸೇತುವೆ ಶಿಥಿಲಾವಸ್ಥೆಗೆ ತಲುಪಲು ಕಾರಣವಾಗಿದೆ. ಅದಿರು ತುಂಬಿದ ಭಾರದ ಲಾರಿಗಳು, ಬೃಹತ್ ಯಂತ್ರೋಪಕರಣಗಳನ್ನು ಸಾಗಿಸುವ ಲಾರಿಗಳು ಪೊಲೀಸರ ಕಣ್ತಪ್ಪಿಸಿ ಸೇತುವೆ ಸಂಚರಿಸುತ್ತಿವೆ. ಹೀಗಾಗಿ ಸೇತುವೆ ಅಪಾಯಕ್ಕೆ ಸಿಲುಕಿದೆ.
ಬಿಜೆಪಿ ಸರ್ಕಾರದಲ್ಲಿ ಸ್ಥಳೀಯ ಸೇತುವೆಯಿಂದ 100 ಮೀ. ಸನಿಹದಲ್ಲಿ ನೂತನ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು, ಆದರೆ, ಯೋಜನೆ ಸ್ಥಗಿತಗೊಂಡಿದೆ.
ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಈ ಕುರಿತು ಮಾತನಾಡಿ, "ಕಂಪ್ಲಿ - ಗಂಗಾವತಿ ಸಂಪರ್ಕ ಕಲ್ಪಿಸುವ ಸೇತುವೆ ಐದು ದಶಕಗಳಷ್ಟು ಹಳೆಯದ್ದು, ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ, ಜಿಲ್ಲಾ ಗಣಿ ಫಂಡ್ ನಿಂದ ಅಥವಾ ಸಚಿವ ಎಚ್.ಡಿ. ರೇವಣ್ಣ ಅವರ ಜೊತೆ ಚರ್ಚೆ ಮಾಡಿ, ವಿಶೇಷ ಅನುದಾನ ಪಡೆದು, ನೂತನ ಸೇತುವೆ ನಿರ್ಮಿಸಲು ಪ್ರಯತ್ನಿಸುವೆ" ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.