ಕುಮಾರಸ್ವಾಮಿ ವಚನ ಭ್ರಷ್ಟ, ಅವರಿಗೆ ಎರಡು ನಾಲಿಗೆ: ಶ್ರೀರಾಮುಲು
ಬಳ್ಳಾರಿ, ಮೇ 31: ಕುಮಾರಸ್ವಾಮಿ ಮತ್ತೆ ವಚನಭ್ರಷ್ಟರಾಗುವ ಸಾಧ್ಯತೆ ಇದೆ ಎಂದಿರುವ ಬಿಜೆಪಿ ನಾಯಕ ಶ್ರೀರಾಮುಲು ಅವರು 'ಕುಮಾರಸ್ವಾಮಿಗೆ ಎರಡು ನಾಲಿಗೆ' ಎಂದು ಮೂದಲಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೀಗೆ ಮುಂದುವರೆದರೆ ಈ ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ. ಕುಮಾರಸ್ವಾಮಿ ಅವರೇ ಸಮ್ಮಿಶ್ರ ಸರ್ಕಾರಕ್ಕೆ ಹೊಡೆತ ನೀಡಲಿದ್ದಾರೆ ಎಂದು ಅವರು ಹೇಳಿದರು.
ರೈತರ ಸಾಲಮನ್ನಾ ಕುರಿತ ಸಭೆಯಲ್ಲಿ ಏನೇನಾಯಿತು? ಇಲ್ಲಿದೆ ಪೂರ್ತಿ ವಿವರ
ಕುಮಾರಸ್ವಾಮಿ ಕೇವಲ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಆದರೆ ಕೃತಿಯಲ್ಲಿ ತೋರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಎರಡು ಹಂತದಲ್ಲಿ ಸಾಲ ಮನ್ನಾ ಎನ್ನುತ್ತಾರೆ, ಸಂಪೂರ್ಣ ಸಾಲಮನ್ನಾ ಎನ್ನುತ್ತಾರೆ ಆದರೆ ಷರತ್ತುಗಳು ಇವೆ ಎನ್ನುತ್ತಾರೆ, ಕುಮಾರಸ್ವಾಮಿ ಅವರಿಗೆ ಈ ವಿಷಯದಲ್ಲಿ ಸಾಕಷ್ಟು ಗೊಂದಲಗಳಿಲ್ಲ ಎಂದರು.
ಸಿದ್ದರಾಮಯ್ಯ ಅವರು 14 ಷರತ್ತುಗಳನ್ನು ಹಾಕಿ ಸಾಲ ಮನ್ನಾ ಮಾಡಿದ್ದರು, ಅವರ ಅವಧಿಯಲ್ಲಿ 250 ಕೋಟಿ ಮಾತ್ರ ಮನ್ನಾ ಮಾಡಲಾಗಿತ್ತು, ಈಗ ಕುಮಾರಸ್ವಾಮಿ ಅವರು ಸಂಪೂರ್ಣ ಸಾಲ ಮನ್ನಾ ಎಂದಿದ್ದವರು ಈಗ ರಾಗ ಬದಲಿಸಿದ್ದಾರೆ ಎಂದರು.
ಸಾಲಮನ್ನಾಕ್ಕೆ 15 ದಿನದ ಕಾಲಾವಕಾಶ ಕೋರಿದ ಕುಮಾರಸ್ವಾಮಿ
ಚುನಾವಣೆಗೆ ಮುಂಚೆ 'ಜನರೇ ನನ್ನ ಹೈಕಮಾಂಡ್ ಎಂದಿದ್ದ ಕುಮಾರಸ್ವಾಮಿ ಈಗ ಕಾಂಗ್ರೆಸ್ ನನ್ನ ಹೈಕಮಾಂಡ್' ಎನ್ನುತ್ತಿದ್ದಾರೆ ಎಂದು ರಾಮುಲು ವ್ಯಂಗ್ಯ ಮಾಡಿದರು. 'ಸಾಲ ಮನ್ನಾ ವಿಳಂಬವಾದರೆ ಅದು ಬಿಜೆಪಿಗೆ ರಾಜಕೀಯ ಲಾಭವಾಗುತ್ತದೆ ಆದರೆ ಅದು ನಮಗೆ ಬೇಡ, ಸಾಲಮನ್ನಾ ವಿಳಂಬವಾದರೆ ರೈತರ ಜೀವ ಹೋಗುತ್ತದೆ, ಅದನ್ನು ತಡೆದರೆ ಸಾಕು' ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಸಿಬಿಐ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು 'ನೋವಿನ ನುಡಿ' ಎಂದ ಶ್ರೀರಾಮುಲು, 'ಡಿಕೆ ಶಿವಕುಮಾರ್ ಅವರದ್ದು ಸುಳ್ಳು ಆರೋಪ, ಯುಪಿಎ ಸರ್ಕಾರ ಇದ್ದಾಗ ಎಷ್ಟು ಜನರ ಮೇಲೆ ಸಿಬಿಐ ದಾಳಿ ಆಗಿತ್ತು. ತಮ್ಮ ಮೇಲೆ ದಾಳಿ ಆಗಿರುವುದಕ್ಕೆ ನೋವಿನಿಂದ ಡಿಕೆ ಶಿವಕುಮಾರ್ ಹೀಗೆ ಹೇಳುತ್ತಿದ್ದಾರೆ ಎಂದರು.