ಕುಮಾರಸ್ವಾಮಿ ಈಗ ಉತ್ತರ ಕುಮಾರ: ಆಯನೂರು ಮಂಜುನಾಥ್
ಉಡುಪಿ, ಜೂನ್ 01 : ರಾಜ್ಯದಲ್ಲಿರೋದು ಸಮ್ಮಿಶ್ರ ಸರ್ಕಾರವಲ್ಲ. ಹಾವು ಮುಂಗುಸಿಯ ಸಮ್ಮಿಶ್ರ ಸಂಸಾರ ಅಂತ ಬಿಜೆಪಿ ನಾಯಕ ಆಯನೂರು ಮಂಜುನಾಥ್ ವಾಗ್ದಾಳಿ ಮಾಡಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆಯನ್ನು ನೋಡಿದ್ರೆ ಇದು ಗಜ ಗರ್ಭದ ತರ ಕಾಣಿಸುತ್ತಿದೆ. ಕಾಂಗ್ರೆಸ್ - ಜೆಡಿಎಸ್ ನದ್ದು ಹಾವು ಮುಂಗುಸಿ ಸಂಸಾರ. ಬಿಜೆಪಿಗೆ ಹೆದರಿ ಹಾವು ಮುಂಗುಸಿ ಒಟ್ಟಾಗಿವೆ.
ಡಿಕೆಶಿ ಒಬ್ಬಂಟಿಯಲ್ಲ, ಕಾಂಗ್ರೆಸ್ ಪಕ್ಷ ಜತೆಗಿದೆ: ಧೈರ್ಯ ತುಂಬಿದ ಸಿದ್ದರಾಮಯ್ಯ
ಚುನಾವಣೆಗೆ ಮುನ್ನ ಕುಮಾರಸ್ವಾಮಿ ಅವರು ಬಹಳ ಪೌರುಷ ತೋರಿದ್ದರು. ಈಗ ಕುಮಾರಸ್ವಾಮಿ ಉತ್ತರ ಕುಮಾರನಾಗಿದ್ದಾರೆ. ಅವರ ಪೌರುಷಗಳೆಲ್ಲ ಅಡಗಿ ಹೋಗಿದೆ. ಫಲಿತಾಂಶ ಬಂದ ನಂತರ ಅವರು ಮಹಾಭಾರತದ ಉತ್ತರ ಕುಮಾರನಾಗಿದ್ದಾರೆ ಎಂದು ಟೀಕಿಸಿದರು.
ಸಾಲಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಬಹುಮತ ಇಲ್ಲ ಅಂತ ಬಂದೂಕನ್ನು ಕಾಂಗ್ರೆಸ್ ಹೆಗಲ ಮೇಲೆ ಇಟ್ಟು ರೈತರ ಮೇಲೆ ಶೂಟ್ ಮಾಡಲು ಹೊರಟಿದ್ದಾರೆ. ಸಿಎಂ ಕುಮಾರಸ್ವಾಮಿ ಸುಳ್ಳು ಹೇಳುವ ನಯವಂಚಕ ಎಂದರು.
ಕೊಟ್ಟ ಮಾತನ್ನು ಈಡೇರಿಸಲು ಸಾಧ್ಯವಾಗದ ಇವರಿಗೆ ಸರ್ಕಾರ ನಡೆಸಲು ಕಷ್ಟ. ಮೈತ್ರಿ ಸರ್ಕಾರ ಬಹುಕಾಲ ಹೋಗಲ್ಲ ಎಂದು ವ್ಯಂಗ್ಯವಾಡಿದರು.