ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು
ಬಳ್ಳಾರಿ, ಅಕ್ಟೋಬರ್ 08: ಎರಡನೇ ಹಂತದ ಸಂಪುಟ ವಿಸ್ತರಣೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇಲೆ ಬೇಸರಗೊಂಡಿರುವ ಅದೇ ಪಕ್ಷದ ಶಾಸಕರು ಉಪಚುನಾವಣೆಯಲ್ಲಿ ತಟಸ್ಥರಾಗಲು ನಿರ್ಧರಿಸಿದ್ದಾರೆ.
ನಿಗದಿತ ಸಮಯಕ್ಕೆ ಸಂಪುಟ ವಿಸ್ತರಣೆ ಮಾಡದೇ ಬಳ್ಳಾರಿ ಜಿಲ್ಲೆಯ ಐದು ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳದೆ ತಟಸ್ಥವಾಗಿರಲು ತೀರ್ಮಾನಿಸಿದ್ದಾರೆ.
ಬಳ್ಳಾರಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಲೇಬೇಕು ಎಂದು ಬಳ್ಳಾರಿ ಜಿಲ್ಲೆಯ ಐದು ಕಾಂಗ್ರೆಸ್ ಶಾಸಕರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಪದೇ ಪದೇ ಸಂಪುಟ ವಿಸ್ತರಣೆ ವಿಳಂಬವಾಗುತ್ತಲೇ ಬಂದಿರುವ ಕಾರಣ ತೀವ್ರ ಅಸಮಾಧಾನಗೊಂಡಿರುವ ಅವರು ಉಪಚುನಾವಣೆಯಲ್ಲಿ ತಟಸ್ಥವಾಗಲು ನಿರ್ಧಿಸಿದ್ದಾರೆ.
ಕಾಂಗ್ರೆಸ್ಸಿನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಬಿಸಿ ಪಾಟೀಲ್ ಟ್ವೀಟ್
ಶಾಸಕರು ಉಪಚುನಾವಣೆಯಲ್ಲಿ ತಟಸ್ಥರಾದರೆ ಬಳ್ಳಾರಿ ಕ್ಷೇತ್ರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಆಗುವುದು ಪಕ್ಕಾ. ನಾಲ್ಕು ಕ್ಷೇತ್ರದ ಮತಗಳು ಖೋತಾ ಆದರೆ ಚುನಾವಣೆ ಗೆಲ್ಲುವುದು ಬಹಳವೇ ಕಷ್ಟವಾಗಲಿದೆ.
ಯಾರ್ಯಾರು ಕೊಡಲಿದ್ದಾರೆ ಕೈ?
ವಿಜಯನಗರ ಶಾಸಕ ಆನಂದ್ ಸಿಂಗ್, ಹೂವಿನ ಹಡಗಲಿ ಕ್ಷೇತ್ರದ ಪರಮೇಶ್ವರ್ ನಾಯ್ಕ್, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಭೀಮಾ ನಾಯ್ಕ್, ಸಂಡೂರು ಕ್ಷೇತ್ರದ ತುಕಾರಾಂ, ಕಂಪ್ಲಿ ಕ್ಷೇತ್ರದ ಜೆ.ಎನ್.ಗಣೇಶ್ ಅವರುಗಳು ಬಳ್ಳಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡದೇ ಬುದ್ದಿ ಕಲಿಸಲು ನಿರ್ಧರಿಸಿದ್ದಾರೆ.
ಸಂಪುಟ ವಿಸ್ತರಣೆ: ಆಕಾಂಕ್ಷಿಗಳ ಗೂಟದ ಕಾರು ಏರುವ ಕನಸು ಮತ್ತೆ ಭಗ್ನ
ಐದೂ ಶಾಸಕರೂ ಒಟ್ಟಾಗಿದ್ದಾರೆ
ಬಳ್ಳಾರಿ ಶಾಸಕರಲ್ಲಿ ಆನಂದ್ ಸಿಂಗ್ ಮತ್ತು ತುಕಾರಾಂ ಮಂತ್ರಿ ಸ್ಥಾನಕ್ಕೆ ತೀವ್ರ ಆಕಾಂಕ್ಷೆ ವ್ಯಕ್ತಪಡಿಸಿದ್ದು. ಜಿಲ್ಲೆಯ ಐದೂ ಶಾಸಕರು ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ನೀಡಲೇ ಬೇಕು ಎಂದು ಒತ್ತಡ ಹೇರುತಿದ್ದಾರೆ.
ವಿಧಾನಸಭಾ ಉಪಚುನಾವಣೆ ಬಿಸಿ, ಸಂಪುಟ ವಿಸ್ತರಣೆಗೆ ಕಸಿವಿಸಿ
ಸಂಪುಟ ವಿಸ್ತರಣೆಗೆ ಶಾಸಕರ ಪಟ್ಟು
ಉಪಚುನಾವಣೆಗೆ ಮುನ್ನವೇ ಸಂಪುಟ ವಿಸ್ತರಣೆ ಮಾಡಿ, ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ. ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಿದರೆ ನಾವು ಕಾಂಗ್ರೆಸ್ ಪರ ಕೆಲಸ ಮಾಡುತ್ತೇವೆ ಇಲ್ಲವೆಂದಾದರೆ ಉಪಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಬೆದರಿಕೆ ತಂತ್ರ ಅನುಸರಿಸಿದ್ದಾರೆ.
ಮನವೊಲಿಸಲಿದ್ದಾರೆ ಡಿ.ಕೆ.ಶಿವಕುಮಾರ್
ಬಳ್ಳಾರಿ ಲೋಕಸಭೆ ಉಪಚುನಾವಣೆಯ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಿದೆ ಕಾಂಗ್ರೆಸ್ ಹಾಗಾಗಿ. ಅತೃಪ್ತ ಶಾಸಕರನ್ನು ಡಿ.ಕೆ.ಶಿವಕುಮಾರ್ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಅತೃಪ್ತ ಶಾಸಕರು ಬಗ್ಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.
ಹಲವು ಬಾರಿ ಮುಂದೆ ಹೋಗಿದೆ ವಿಸ್ತರಣೆಸ
ಸಂಪುಟ ವಿಸ್ತರಣೆ ಮಾಡುವುದಾಗಿ ಕಾಂಗ್ರೆಸ್ ಪಕ್ಷವು ಭರವಸೆ ನೀಡಿ ಈಗಾಗಲೇ ಹಲವು ತಿಂಗಳುಗಳು ಕಳೆದಿದೆ. ಈಗಾಗಲೇ ನಾಲ್ಕೈದು ಬಾರಿ ಸಂಪುಟ ವಿಸ್ತರಣೆಯನ್ನು ಮುಂದೂಡಲ್ಪಟ್ಟಿದೆ. ಈ ಬಾರಿ ಅಕ್ಟೋಬರ್ 10 ರ ಒಳಗೆ ವಿಸ್ತರಣೆ ಪಕ್ಕಾ ಎನ್ನಲಾಗಿತ್ತು. ಆದರೆ ಉಪಚುನಾವಣೆ ನೆಪ ಹೇಳಿ ಮತ್ತೆ ಸಂಪುಟ ವಿಸ್ತರಣೆ ಮುಂದೂಡಲ್ಪಟ್ಟಿದೆ.