ಬಳ್ಳಾರಿ: ಕಾಂಗ್ರೆಸ್ ಮುಖಂಡನಿಂದ ವೈದ್ಯರ ಮೇಲೆ ಹಲ್ಲೆ
ಬಳ್ಳಾರಿ, ಮಾರ್ಚ್ 02: ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಪ್ರಕರಣಗಳ ಸರಣಿ ಮುಗಿಯುವಂತೆ ಕಾಣುತ್ತಿಲ್ಲ. ಯುವ ಕಾಂಗ್ರೆಸ್ನ ಮೊಹಮ್ಮದ್ ನಲಪಾಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೆಟ್ರೋಲ್ ನಾರಾಯಣಸ್ವಾಮಿ ಅವರುಗಳ ಗೂಂಡಾಗಿರಿ ನಂತರ ಈಗ ಬಳ್ಳಾರಿಯ ಕಾಂಗ್ರೆಸ್ ಮುಖಂಡನೊಬ್ಬ ವೈದ್ಯರ ಮೇಲೆಯೇ ಹಲ್ಲೆ ನಡೆಸಿದ್ದಾನೆ.
ಬಳ್ಳಾರಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫರ್ಹಾನ್ ಅಹ್ಮದ್ ಬಳ್ಳಾರಿ ಜಿಲ್ಲಾ ಆಸ್ಪತ್ರೆ ರೆಡಿಯಾಲಜಿ ವೈದ್ಯ ವಿನೋದ್ ಎಂಬುವರ ಮೇಲೆ ಹಲ್ಲೆ ಮಾಡಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೂಂಡಾಗಿರಿ ತೋರಿದ ಕೈ ಮುಖಂಡ ನಾರಾಯಣಸ್ವಾಮಿ ಮೇಲೆ 6 ಕೇಸು
ಪೊಲೀಸ್ ಇನ್ಸ್ಪೆಕ್ಟರ್ ಗಾಯತ್ರಿ ಅವರ ಪತಿಯೂ ಆಗಿರುವ ಫರ್ಹಾನ್ ಅಹ್ಮದ್ ಅವರು ಬುಧವಾರ ಆಸ್ಪತ್ರೆಗೆ ನುಗ್ಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೈದ್ಯ ವಿನೋದ್ ದೂರು ದಾಖಲಿಸಿದ್ದು ಅವರಿಗೆ ಬೆಂಬಲ ಸೂಚಿಸಿ ರೇಡಿಯಾಲಜಿಸ್ಟರ ಸಂಘ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪ್ರಮುಖರು ಪ್ರತಿಭಟನೆಯನ್ನೂ ಮಾಡಿದ್ದಾರೆ.
ಗರ್ಭಿಣಿಯಾಗಿರುವ ಇನ್ಸ್ಪೆಕ್ಟರ್ ಗಾಯತ್ರಿ ಅವರು ಆರೋಗ್ಯ ತಪಾಸಣೆಗೆಂದು ಬುಧವಾರ ಆಸ್ಪತ್ರೆಗೆ ತೆರಳಿದ್ದರು. ಆ ಸಮಯದಲ್ಲಿ ಬೇರೆ ರೋಗಿಗಳನ್ನು ಉಪಚರಿಸುತ್ತಿದ್ದ ವೈದ್ಯರು ಇವರನ್ನು ಸ್ವಲ್ಪ ಹೊತ್ತು ಕಾಯುವಂತೆ ಕೋರಿದರು. ಮೊದಲು ತಮ್ಮ ಆರೋಗ್ಯ ತಪಾಸಣೆ ಮಾಡುವಂತೆ ಗಾಯತ್ರಿ ಒತ್ತಾಯಿಸಿದರು. ಇದರಿಂದ ವೈದ್ಯರು ಮತ್ತು ಗಾಯತ್ರಿ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಗಾಯತ್ರಿ ಅವರು ತಮ್ಮ ಪತಿ ಫರ್ಹಾನ್ ಅಹ್ಮದ್ ಅವರನ್ನು ಫೋನು ಮಾಡಿ ಕರೆಸಿಕೊಂಡರು. ಸಿಟ್ಟಿನಿಂದ ಬಂದ ಫರ್ಹಾನ್ ವೈದ್ಯರ ಮೇಲೆ ಹಲ್ಲೆ ನಡೆಸಿದರು' ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಘಟನೆ ಕುರಿತು ಸಮಗ್ರ ವರದಿ ಕೊಡುವಂತೆ ಡಿವೈಎಸ್ಪಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೊನೆಗೂ ಪೊಲೀಸರಿಗೆ ಶರಣು