ಬಳ್ಳಾರಿ: ನೀರಿನ ಬೆಲೆ ಗೊತ್ತಾದ ಮೇಲೆ, ಮುಚ್ಚಿದ ಬಾವಿ ನೆನಪಾದವು!
ಬಳ್ಳಾರಿ ಮಹಾ ನಗರ ಪಾಲಿಕೆಯಿಂದ ಪುರಾತನ ಬಾವಿಗಳ ಮರು ಬಳಕೆ. ಕಸದ ತೊಟ್ಟಿಯಂತಾಗಿದ್ದ ಹಲವಾರು ಬಾವಿಗಳನ್ನು ಮತ್ತೆ ತೆರೆಸಲು ಮುಂದಾಗಿರುವ ಪಾಲಿಕೆ.
ಬಳ್ಳಾರಿ, ಆಗಸ್ಟ್ 17: ಮುಂಗಾರು ಮಾರುತಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಉಂಟಾಗಿರುವ ಜಲಕ್ಷಾಮದ ಸಮಸ್ಯೆಯನ್ನು ಹತ್ತಿಕ್ಕಲು ಸಿದ್ಧವಾಗಿರುವ ಮಹಾನಗರ ಪಾಲಿಕೆ, ಬಳ್ಳಾರಿಯಲ್ಲಿ ಕೆಲ ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಪುಷ್ಕರಣಿಗಳನ್ನು ಶುದ್ಧಗೊಳಿಸುವ ಕೈಂಕರ್ಯಕ್ಕೆ ಮುಂದಾಗಿದೆ.
ಇದರ ಪ್ರಾಥಮಿಕ ಹೆಜ್ಜೆಯಾಗಿ, ನಗರದ ದೇವಿ ನಗರ ಪ್ರಾಂತ್ಯದಲ್ಲಿರುವ ಅಕ್ಕಮಬಾವಿಯನ್ನು ಶುದ್ಧಗೊಳಿಸಿರುವ ಪಾಲಿಕೆ, ಈಗ ಅದರ ದುರಸ್ತಿಗೆ ಮುಂದಾಗಿದೆ.
ವಿಜಯ ನಗರ ಕಾಲದಲ್ಲಿ ಕಟ್ಟಲಾಗಿದ್ದ ಈ ಪುಷ್ಕರಣಿಯು, ಅನೇಕ ಮೆಟ್ಟಿಲುಗಳನ್ನು ಹೊಂದಿದ್ದು, ಸುಂದರವಾಗಿದೆ. ಈ ಪುಷ್ಕರಣಿಗೆ ಹೊಂದಿಕೊಂಡಂತೆ ಎರಡು ದೇವಾಲಯಗಳೂ ಇವೆ. ಕಾಲಾನುಕ್ರಮದಲ್ಲಿ ಇದಕ್ಕೆ ಸೈನಿಕರ ಬಾವಿ, ಅಕ್ಕಮಬಾವಿ (ದೇಗುಲದ ಹೆಸರು) ಎಂಬ ಹೆಸರುಗಳೂ ಬಂದಿದ್ದವು.
ಆಯತಾಕಾರದಲ್ಲಿರುವ ಈ ಬಾವಿಯು, 43 ಅಡಿ ಉದ್ದ, 15 ಅಡಿ ಆಳವಾಗಿದೆ. ಇದಕ್ಕೆ ಹೊಂದಿಕೊಂಡಂತೆ ಮಂಟಪವೂ ಒಂದಿದೆ.
ಕಳೆದ ಕೆಲವಾರು ವರ್ಷಗಳಿಂದ ಈ ಬಾವಿಯ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದಾಗಿ, ಈ ಬಾವಿಯು ಕಸದ ಬಾವಿಯಾಗಿ ಪರಿವರ್ತನೆಗೊಂಡಿತ್ತು. ಈಗ ಜಲಕ್ಷಾಮ ಎದುರಾದ ನಂತರ, ಈಗ ಈ ಬಾವಿಯನ್ನು ಶುದ್ಧಗೊಳಿಸಲು ಪಾಲಿಕೆ ಮುಂದಾಗಿರುವುದನ್ನು ಜನರೂ ಸ್ವಾಗತಿಸಿದ್ದಾರೆ. ಇಂಥ ಇನ್ನೂ ಹಲವಾರು ಪುರಾತನ ಬಾವಿಗಳನ್ನು ಪತ್ತೆ ಹಚ್ಚಿ ಅವುಗಳ ಪುನರ್ ಬಳಕೆಗೆ ಸಿದ್ಧಪಡಿಸುವುದಾಗಿ ಪಾಲಿಕೆ ತಿಳಿಸಿದೆ.