ಅಂದು ಬಳ್ಳಾರಿ, ಇಂದು ಬಾದಾಮಿ: ಸಿದ್ಧರಾಮಯ್ಯ v/s ಶ್ರೀರಾಮುಲು
ಬಳ್ಳಾರಿ, ಏಪ್ರಿಲ್. 24 : ಬನಶಂಕರಿ ಮಾತೆಯ ಆಶೀರ್ವಾದ ಸಿಕ್ಕಿದೆ. ಬಾದಾಮಿ ಜನರ ಪ್ರೀತಿ, ಬೆಂಬಲವೂ ಸಿಕ್ಕಿದೆ. ಅಮ್ಮನ ಆಶೀರ್ವಾದ, ಜನರ ಪ್ರೀತಿ ನೋಡಿದರೆ ನಾನು ಬಹು ಮತದೊಂದಿಗೆ ಯುದ್ಧ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಸಂಸದ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಬಾದಾಮಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿ ಅವರು ಮಾತನಾಡಿದರು.
ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದ ಬಿಜೆಪಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಬಾದಾಮಿಯಲ್ಲಿಯೂ ಕಣಕ್ಕಿಳಿಸಿ ಕುರುಬ - ವಾಲ್ಮೀಕಿ ಅಥವಾ ಸಿದ್ಧರಾಮಯ್ಯ - ಬಿ. ಶ್ರೀರಾಮುಲು ಮಧ್ಯೆ ಯುದ್ಧ ಘೋಷಣೆ ಮಾಡಿದೆ.
ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಶ್ರೀರಾಮುಲು
ಸದನದಲ್ಲಿ ಗಣಿ ಹಗರದ ಬಿಸಿಬಿಸಿ ಚರ್ಚೆ ನಡೆದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದ ರೆಡ್ಡಿ ಆಪ್ತ, ಬಿ. ಶ್ರೀರಾಮುಲು ಸೋದರಳಿಯ ಟಿ.ಎಚ್. ಸುರೇಶಬಾಬು ಮತ್ತು ರೆಡ್ಡಿ ಬಳಗಕ್ಕೆ ಪಾಠ ಕಲಿಸಲಿಕ್ಕಾಗಿ ಸಿದ್ಧರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಕಾಲ್ನಡಿಗೆ ಮಾಡಿ, ಕಾಂಗ್ರೆಸ್ ಪುನಶ್ಚೇತನಕ್ಕೆ ಕಾರಣರಾದರು. ಮುಖ್ಯಮಂತ್ರಿಯೂ ಆದರು.
ಆಗಲೇ, ಸಿದ್ದು - ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ ಅಘೋಷಿತ ಯುದ್ಧ ಘೋಷಣೆಯಾಗಿತ್ತು. ಈಗ ಯುದ್ಧ ಅಲ್ಪ ವಿರಾಮ ಪಡೆದಿತ್ತು. ಆದರೆ, ಜಿ. ಜನಾರ್ದನರೆಡ್ಡಿ ಸಿದ್ಧರಾಮಯ್ಯ ಅವರನ್ನು ಸಿದ್ಧರಾವಣ' ಎಂದು ಮೊಳಕಾಲ್ಮೂರುನಲ್ಲಿ ರಣಕಹಳೆ ಊದುವ ಮೂಲಕ, ವಿರಾಮಗೊಂಡಿದ್ದ ಯುದ್ಧ ಪುನಃ ಸದ್ದು ಮಾಡಿತ್ತು. ಆ ಯುದ್ಧ ಈಗ ಬಾದಾಮಿಯಲ್ಲಿ ಮುಂದುವರೆದಿದೆ.
ಬಿ. ಶ್ರೀರಾಮುಲು ಮೊಳಕಾಲ್ಮೂರು - ಬಾದಾಮಿ ಎರಡೂ ಕ್ಷೇತ್ರವನ್ನು ಗೆಲ್ಲಲೇಬೇಕು. ಇಲ್ಲವಾದಲ್ಲಿ ಅವರ ರಾಜ್ಯಮಟ್ಟದ ನಾಯಕತ್ವಕ್ಕೆ ಮಂಕು ಕವಿಯಲಿದೆ. ಇಲ್ಲವಾದಲ್ಲಿ ಅವರ ಉಪ ಮುಖ್ಯಮಂತ್ರಿ, ಗೃಹ ಇಲಾಖೆಯ ಕನಸುಗಳು ಏನಾಗುತ್ತವೆ? ಎನ್ನುವ ಪ್ರಶ್ನೆ ಅವರ ಆಪ್ತರಲ್ಲಿ ತೀವ್ರವಾಗಿ ಕಾಡುತ್ತಿವೆ.
ಯಾವುದಕ್ಕೂ ಮೇ 15ರ ಮಧ್ಯಾಹ್ನದವರೆಗೆ ನಾವೆಲ್ಲರೂ ಕಾಯಲೇಬೇಕು.