ಹೊಸಪೇಟೆಯ ಸಭೆಯಲ್ಲಿ ಮಹಾದಾಯಿ ಬಗ್ಗೆ ಮಾತೇ ಆಡದ ರಾಹುಲ್ ಗಾಂಧಿ
ಬಳ್ಳಾರಿ, ಫೆಬ್ರವರಿ 10 : "ಕಳೆದ ವಾರ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಹಾದಾಯಿ ಬಗ್ಗೆ ಮಾತನಾಡಲಿಲ್ಲ" ಎಂದು ಹೊಸಪೇಟೆಯ ಜನಾಶೀರ್ವಾದ ಸಭೆಯಲ್ಲಿ ಶನಿವಾರ ಟೀಕೆ ಮಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರೆ ಅವರದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮಹಾದಾಯಿ ಬಗ್ಗೆ ಏನೇನೂ ಪ್ರಸ್ತಾವ ಮಾಡಲಿಲ್ಲ.
ಇದೇ ವಿಚಾರವಾಗಿ ಫೆಬ್ರವರಿ ನಾಲ್ಕರಿಂದ ಈಚೆಗೆ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸಲಾಗುತ್ತಿತ್ತು. ಗೋವಾದಲ್ಲಿ ಇತರ ಪಕ್ಷಗಳ ಬೆಂಬಲದ ಜತೆಗೆ ಬಿಜೆಪಿ ಸರಕಾರ ರಚಿಸಿದೆ. ಕರ್ನಾಟಕದ ಪರವಾಗಿ ಮಹಾದಾಯಿ ವಿಚಾರವನ್ನು ಮೋದಿ ಪ್ರಸ್ತಾಪಿಸಿದರೆ ಅಲ್ಲಿನ ಸರಕಾರಕ್ಕೆ ಹೊಡೆತ ಎಂದು ಆರೋಪಿಸಲಾಗುತ್ತಿತ್ತು.
ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ
ಆದರೆ, ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಮಹಾದಾಯಿ ಬಗ್ಗೆ ಏನೇನೂ ಪ್ರಸ್ತಾಪ ಮಾಡದೆ ಭಾಷಣ ಮುಗಿಸಿರುವುದರಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಸಹ ಒಂದೇ ರೀತಿಯ ರಾಜಕಾರಣ ಮಾಡುತ್ತಿವೆಯೇ ಎಂಬ ಅನುಮಾನ ಮೂಡುವಂತಿದೆ. ರಾಹುಲ್ ಗಾಂಧಿ ಅವರದು ರಾಜ್ಯದಲ್ಲಿ ಇನ್ನೂ ಸಭೆಗಳಿರುವುದರಿಂದ ಅಲ್ಲಾದರೂ ಪ್ರಸ್ತಾವ ಮಾಡಬಹುದೇನೋ? ಕಾದು ನೋಡಬೇಕಿದೆ.