ಚಳಿಗಾಲದ ಅಧಿವೇಶನ : ಯಾವ ಪಕ್ಷದ ಪಟ್ಟು ಯಾವುದರ ಮೇಲೆ
ನವೆಂಬರ್ 13, ಬೆಂಗಳೂರು : ಬೆಳಗಾವಿ ಅಧಿವೇಶನ ಇಂದಿನಿಂದ (ನವೆಂಬರ್ 13) ಪ್ರಾರಂಭವಾಗುತ್ತಿದೆ. ಚುನಾವಣೆ ಸಮೀಪದಲ್ಲಿರುವುದರಿಂದ ಈ ಅಧಿವೇಶನಕ್ಕೆ ಹಿಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಒದಗಿಬಂದಿದೆ. ರಾಜ್ಯದ ಪ್ರಮುಖ ಮೂರೂ ಪಕ್ಷಗಳ ಅಧಿವೇಶನವನ್ನು ಚುನಾವಣೆಗೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶವನ್ನು ಇಟ್ಟಿಕೊಂಡೆ ರಣರಂಗಕ್ಕೆ ಇಳಿಯಲಿವೆ.
ಚಳಿಗಾಲದ ಅಧಿವೇಶನದ ವೇಳೆ ಸರ್ಕಾರಕ್ಕೆ ಚಳಿ ಬಿಡಿಸಲು ಮಾದಿಗರು ಸಜ್ಜು
ವಿರೋಧ ಪಕ್ಷ ಬಿ.ಜೆ.ಪಿ ಈ ಅಧಿವೇಶನದಲ್ಲಿ ಸರ್ಕಾರದ ದುರಾಡಳಿತವನ್ನು ಎತ್ತಿ ಹಿಡಿಯುವ ಮೂಲಕ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಸರ್ವ ಸನ್ನಧವಾಗಿದೆ. ಅದರ ಜೊತೆಗೆ ಜೆ.ಡಿ.ಎಸ್ ಕೂಡ ಇದೇ ಕಾರ್ಯತಂತ್ರದೊಂದಿಗೆ ಅಧಿವೇಶನಕ್ಕೆ ಕಾಲಿಡಲಿದೆ.
ಸಿದ್ದರಾಮಯ್ಯ ಸರ್ಕಾರ ತನ್ನ ಸಾಧನಾ ಪಟ್ಟಿಯೊಂದಿಗೆ ಅಧಿವೇಶನಕ್ಕೆ ಕಾಲಿಡಲಿದೆ. ಸರ್ಕಾರ ಹೇಗೆ ಚಾಣಾಕ್ಷತನದಿಂದ ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸಿ ಜವಾಬು ನೀಡುತ್ತದೆಯೊ ಎಂಬುದು ಕುತೂಹಲದ ವಿಷಯ. ವಿರೋಧ ಪಕ್ಷಗಳ ಟೀಕೆಗೆ ಸರಿಯಾಗಿ ಉತ್ತರವನ್ನು ನೀಡಲಿದೆ ಎನ್ನುತ್ತಿವೆ ಬಲ್ಲ ಮೂಲಗಳು.
ಇಂದಿನಿಂದ ಬೆಳಗಾವಿ ಅಧಿವೇಶನ, 7 ಪ್ರತಿಭಟನೆ
ಇನ್ನು ಇದೇ ಸಮಯದಲ್ಲಿ ಹಲವು ರೈತ ಪರ ಸಂಘಟನೆಗಳು ತಮ್ಮ ಒತ್ತಾಯ ಹೇರಿಕೆಗೆ ಅಧಿವೇಶನಕ್ಕೆ ಮುತ್ತಿಗೆ ಹಾಕಲು ಯೋಜಿಸಿದೆ. ಇದರ ಜೊತೆಗೆ ವೈದ್ಯರು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಛಲೋ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. 10 ದಿನವೂ ಪ್ರತಿಭಟನೆಯ ಬಿಸಿಯನ್ನು ಚಳಿಗಾಲದ ಅಧಿವೇಶನ ಎದುರಿಸಲಿದೆ.
ಒಟ್ಟಿನಲ್ಲಿ 10 ದಿನಗಳ ಕಾಲ ನಡೆಯುವ 'ಪ್ರಜಾಪ್ರಭುತ್ವದ' ಹಬ್ಬದಲ್ಲಿ ಆಡಳಿತ-ವಿರೋಧ ಪಕ್ಷಗಳ ಟೀಕೆಗಳೇ ಮೇಲುಗೈ ಸಾಧಿಸುತ್ತವೆಯೊ ಅಥವಾ ರಾಜ್ಯದ ಕುಂದು ಕೊರತೆಗಳ ಬಗ್ಗೆ ಗಂಭೀರ ಚರ್ಚೆಗಳಾಗುತ್ತವೆಯೊ ನೋಡಬೇಕು.
ಅಧಿವೇಶನದಲ್ಲಿ ಯಾರ ಪ್ಲಾನ್ ಏನು, ಪ್ರತಿಭಟನೆ ಯಾರು ಮಾಡುತ್ತಾರೆ, ಈ ಬಾರಿ ಗದ್ದಲ ಎಬ್ಬಿಸಬಹುದಾದ ವಿಷಯಗಳು ಯಾವುವು, ಕಳೆದ ವರ್ಷ ಏನಾಗಿತ್ತು ತಿಳಿಯಲು ಮುಂದೆ ಓದಿರಿ...
ಸರ್ಕಾರಕ್ಕೆ ಮುಜುಗರ ಮಾಡುವುದೇ ಉದ್ದೇಶ
ವಿರೋಧ ಪಕ್ಷ ಬಿ.ಜೆ.ಪಿ ಈ ಬಾರಿ ಭಾರಿ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯಲಿದೆ. ಸರ್ಕಾರದ ಅಕ್ರಮಗಳನ್ನು, ನಾಡಿನಲ್ಲಿ ಉಂಟಾಗಿರುವ ಅರಾಜಕತೆಗಳನ್ನು ಸರ್ಕಾರದ ಮುಖಕ್ಕೆ ಹಿಡಿದು ಅದನ್ನು ಪೇಚಿಗೆ ಸಿಲುಕಿಸಿ, ಅಧಿವೇಶನದ ಮೂಲಕ ಸರ್ಕಾರದ ವಿಫಲತೆಗಳನ್ನು ನಾಡಿನ ಜನತೆಗೆ ತಲುಪಿಸುವ ಯೋಜನೆಯ ನೀಲ ನಕ್ಷೆ ಸಿದ್ದಮಾಡಿಕೊಂಡಿದೆ.
ಕಳೆದ ಅಧಿವೇಶನದಲ್ಲಿ ಬಿ.ಜೆ.ಪಿಯ ಮುಖ್ಯ ವಿಷಯವಾಗಿದ್ದ ಗಣಪತಿ ಹತ್ಯೆ ಪ್ರಕರಣ ಈ ವರ್ಷವೂ ಬಿ.ಜೆ.ಪಿಯ ಶಸ್ತ್ರ ಭಂಡಾರದಲ್ಲಿನ ಪ್ರಮುಖ ಟೀಕಾಸ್ತ್ರವಾಗಿರಲಿದೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿ.ಬಿ.ಐ, ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಫ್.ಐ.ಆರ್ ದಾಖಲಿಸಿರುವುದರಿಂದ ವಿರೋಧ ಪಕ್ಷಗಳು ಅವರ ರಾಜಿನಾಮೆಗೆ ಪಟ್ಟು ಹಿಡಿಯಲಿವೆ. ಇದರ ಜೊತೆಗೆ ಡಿ.ಕೆ.ಶಿವಕುಮಾರ್ ಮೇಲಿನ ಐ.ಟಿ ರೇಡ್, ಹಿಂದೂ ಕಾರ್ಯಕರ್ತರ ಹತ್ಯೆಗಳಂತಹಾ ವಿಷಯಗಳನ್ನು ಚರ್ಚೆಗೆ ಎಳೆದು ಸರ್ಕಾರಕ್ಕೆ ಛೀಮಾರಿ ಹಾಕಲಿವೆ.
ಗೌರಿ ಲಂಕೇಶ್ ಹತ್ಯೆ, ಗಣಪತಿ ಆತ್ಮಹತ್ಯೆಗಳೇ ಪ್ರಮುಖ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಬಿಜೆಪಿ ಅವಧಿಯಲ್ಲಿ ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ, ಟಿಪ್ಪು ಜಯಂತಿ ಆಚರಣೆ, ಗೌರಿ ಹತ್ಯೆ, ರೈತರ ಸಮಸ್ಯೆ ಹಾಗೂ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದಾದ ಹಾನಿ, ಹಿಂದೂ ಕಾರ್ಯಕರ್ತರ ಹತ್ಯೆ... ಇವು ಬೆಳಗಾವಿ ಅಧಿವೇಶನದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಲಿದೆ. ಅದರಲ್ಲಿಯೂ ಗಣಪತಿ ಆತ್ಮಹತ್ಯೆ ಮತ್ತು ಗೌರಿ ಹತ್ಯೆ ವಿಷಯ ಅಧಿವೇಶನದ ಬಹುತೇಕ ಸಮಯವನ್ನು ತಿನ್ನುವುದರಲ್ಲಿ ಸಂಶಯವೇ ಇಲ್ಲ.
ಶೋಭಾ ಕರಂದ್ಲಾಜೆ ಕಾಂಗ್ರೆಸ್ ಶಾಕ್?
ಚುನಾವಣೆ ಹತ್ತಿರದಲ್ಲಿರುವುದರನ್ನು ಅರಿತಿರುವ ಸರ್ಕಾರ ಈ ಅಧಿವೇಶನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಜ್ಜಾಗಿದೆ. ವಿರೋಧ ಪಕ್ಷಗಳ ಟೀಕೆಗೆ ಎದುರಾಗಿ ತನ್ನ ಸಾಧನೆಗಳ ಪಟ್ಟಿಯನ್ನು ಹಿಡಿಯಲಿದೆ.
ಇದಲ್ಲದೆ ವಿರೋಧ ಪಕ್ಷವನ್ನು ಪೇಚಿಗೆ ಸಿಲುಕಿಸಲು ಬಿ.ಜೆ.ಪಿಯ ಪ್ರಮುಖ ನಾಯಕರಾದ ಶೋಭಾ ಕರಂದ್ಲಾಜೆ ಅವರ ಸಮಯದಲ್ಲಿ ನಡೆದಿತ್ತೆನ್ನಲ್ಲಾದ ವಿದ್ಯುತ್ ಖರೀದಿ ಹಗರಣವನ್ನು ಕಾಂಗ್ರೆಸ್ ಚರ್ಚೆಗೆ ತರಲಿದೆ. ಶೋಭಾ ಕರಂದ್ಲಾಜೆ ಅವರು ವಿದ್ಯುತ್ ಖಾತೆ ಮಂತ್ರಿ ಆಗಿದ್ದಾಗ ಖಾಸಗಿ ಕಂಪೆನಿಯೊಂದರ ಜೊತೆ 25 ವರ್ಷಗಳ ಅವಧಿಗೆ ಮಾಡಿಕೊಂಡ ವಿದ್ಯುತ್ ಖರೀದಿ ಒಪ್ಪಂದ ರದ್ದುಪಡಿಸಿ, ಅದೇ ಕಂಪೆನಿಯೊಂದಿಗೆ ಅಲ್ಪಾವಧಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಬೊಕ್ಕಸಕ್ಕೆ 28,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.
ವೈದ್ಯರ ಬೆಳಗಾವಿ ಚಲೋ
ಅಧಿವೇಶನ ನಡೆಯುವ ಹತ್ತೂ ದಿನ ಒಂದೊಂದು ಪ್ರತಿಭಟನೆಗಳಿಗೆ ಬೆಳಗಾವಿ ಸಾಕ್ಷಿಯಾಗಲಿದೆ. ಅಧಿವೇಶನದ ನಡೆಯುವ ಅವಧಿ ಸರ್ಕಾರದ ಮೇಲೆ ಒತ್ತಡ ಹೇರಲು ಸೂಕ್ತ ಸಮಯ ಎಂದು ಅರಿತಿರುವ ಸಂಘಟನೆಗಳು ಈಗಾಗಲೇ ಅವಶ್ಯಕ ಅನುಮತಿಯನ್ನು ಪೊಲೀಸರಿಂದ ಪಡೆದಿದ್ದಾರೆ.
ಮಹಾದಾಯಿ ಹೋರಾಟಗಾರರ ಪ್ರತಿಭಟನೆ, ರೈತ ಸಂಘಗಳ ಪ್ರತಿಭಟನೆ ಮತ್ತು ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆ ವಿರೋಧಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗಳು ಇವುಗಳಲ್ಲಿ ಮುಖ್ಯವಾದವು.
ಕೆಎಂಪಿಎ ಕಾಯ್ದೆ ತಿದ್ದುಪಡಿಗೆ ವಿರೋಧ, ವೈದ್ಯರಿಂದ ಬೆಳಗಾವಿ ಚಲೋ
ಸಮಯ ನುಂಗಿದ್ದ ವಾದ-ವಿವಾದ
ಕಳೆದ ವರ್ಷದ ಚಳಿಗಾಲ ಅಧಿವೇಶನವೂ ಬಹುತೇಕ ಗದ್ದಲಕ್ಕೆ ಬಲಿಯಾಗಿತ್ತು. ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ರಸ್ತೆ (ಬಿಎಂಐಸಿ) ಯೋಜನೆಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಹಗರಣ, ಬರಗಾಲ, ಮಹದಾಯಿ ಮೊದಲಾದ ವಿಷಯಗಳು ಕಲಾಪವನ್ನೇ ನುಂಗಿಹಾಕಿದ್ದವು. ಹೆಚ್ಚುಕಡಿಮೆ ಅದೇ ವಾತಾವರಣ ಈಗಲೂ ಇದ್ದಂತಿದೆ. ಆದರೆ, ಸಮಸ್ಯೆಗಳು ಮಾತ್ರ ಬೇರೆ.