ವೈರಲ್ ಸುದ್ದಿ : ಗಣೇಶ್ ಹುಕ್ಕೇರಿ ಜನವರಿ 19ರಂದು ಬಿಜೆಪಿಗೆ ಸೇರ್ಪಡೆ!
ಬೆಳಗಾವಿ, ಜನವರಿ 13 : ಭಾನುವಾರ ರಾಜ್ಯ ರಾಜಕಾರಣದ ಸುದ್ದಿಯೊಂದು ವೈರಲ್ ಆಗಿದೆ. ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಬಿಜೆಪಿ ಸೇರಲಿದ್ದಾರೆ ಎಂಬುದು ಸುದ್ದಿಯಾಗಿದೆ.
ಜನವರಿ 13ರ ಭಾನುವಾರ ಬೆಳಗ್ಗೆಯಿಂದ ಇಂಹತ ಸುದ್ದಿ ವೈರಲ್ ಆಗಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಗಣೇಶ್ ಹುಕ್ಕೇರಿ ಅವರು ಮಾತನಾಡಿರುವ ಆಡಿಯೋ ಸಹ ಎಲ್ಲಾ ಕಡೆ ಹರಿದಾಡುತ್ತಿದೆ. ಗಣೇಶ್ ಹುಕ್ಕೇರಿ ಮಾಜಿ ಸಚಿವ, ಹಾಲಿ ಚಿಕ್ಕೋಡಿ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ.
ಚಿಕ್ಕೋಡಿ ಸದಲಗಾ : ಗಣೇಶ್ ಹುಕ್ಕೇರಿಗೆ ಜಯ
'ನಾನು ಜನವರಿ 19ರಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಲಿದ್ದಾನೆ. ಬೇರೆಯವರ ಹೆಸರು ಹೇಳಲ್ಲ. ನಾನಂತೂ ಬಿಜೆಪಿಗೆ ಹೋಗುತ್ತೇನೆ' ಎಂದು ಗಣೇಶ್ ಹುಕ್ಕೇರಿ ನಡೆಸಿರುವ ದೂರವಾಣಿ ಸಂಭಾಷಣೆ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಬಿಜೆಪಿಯ ಎಲ್ಲ ಶಾಸಕರು ದೆಹಲಿಗೆ, ಒಳಮರ್ಮವೇನು?
ಕರ್ನಾಟಕ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವಾಗ ಗಣೇಶ್ ಹುಕ್ಕೇರಿ ಅವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಯಾರು, ಏನು ಹೇಳಿದರು? ಚಿತ್ರಗಳಲ್ಲಿ ನೋಡಿ.....
ರಾಜ್ಯ ಸರ್ಕಾರದ ಕುರಿತು ಭವಿಷ್ಯ ಹೇಳಲು ಸಿದ್ಧವಿಲ್ಲ ಎಂದ ಬಿಎಸ್ ವೈ
ಗಣೇಶ್ ಹುಕ್ಕೇರಿ ಸ್ಪಷ್ಟನೆ
ವೈರಲ್ ಆಗಿರುವ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಗಣೇಶ್ ಹುಕ್ಕೇರಿ ಅವರು, 'ಪೋನ್ನಲ್ಲಿ ಹೇಳಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ತಮಾಷೆಗಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷ ನಮಗೆ ಬಹಳಷ್ಟುನೀಡಿದೆ. ಉನ್ನತ ಹುದ್ದೆಯನ್ನು ನೀಡಿದೆ. ಪಕ್ಷ ಬಿಟ್ಟು ಹೋಗುವುದಿಲ್ಲ. ಲೋಕಸಭಾ ಚುನಾವಣೆ ಬರುತ್ತಿದೆ. ನಮ್ಮ ತಂದೆಯವರು ಚಿಕ್ಕೋಡಿಯಿಂದ ಸ್ಪರ್ಧಿಸಲಿದ್ದಾರೆ. ಅವರ ಗೆಲುವಿಗಾಗಿ ಕೆಲಸ ಮಾಡುತ್ತೇನೆ' ಎಂದು ಹೇಳಿದರು.
ಪ್ರಕಾಶ್ ಹುಕ್ಕೇರಿ ಹೇಳಿದ್ದೇನು?
ಗಣೇಶ್ ಹುಕ್ಕೇರಿ ಬಿಜೆಪಿ ಸೇರುವ ಕುರಿತು ಸಂಸದ ಪ್ರಕಾಶ್ ಹುಕ್ಕೇರಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ಕುಟುಂಬದವರು ಯಾರೂ ಬಿಜೆಪಿಗೆ ಹೋಗುವುದಿಲ್ಲ. ಗಣೇಶ್ ಹುಕ್ಕೇರಿ ಅವರೇ ಈ ಕುರಿತು ಹೇಳಿಕೆ ನೀಡಿದ್ದಾರೆ. ವದಂತಿಗಳಿಗೆ ಜನರು ಕಿವಿಗೊಡಬಾರದು' ಎಂದು ಹೇಳಿದರು.
'ಯಾರೂ ಎಲ್ಲೂ ಹೋಗಲ್ಲ'
ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಮಾತನಾಡಿದ್ದು, 'ಹಲವು ತಿಂಗಳುಗಳಿಂದ ಇಂತಹ ಸುದ್ದಿ ಕೇಳಿ ಬರುತ್ತಿದೆ. ಯಾರೂ ಎಲ್ಲೂ ಹೋಗಲ್ಲ. ಕೆಲವು ವೈಯಕ್ತಿಕ ಕೆಲಸಗಳಿಗಾಗಿ ಶಾಸಕರು ದೆಹಲಿಗೆ ತೆರಳಿದ್ದಾರೆ' ಎಂದು ಸ್ಪಷ್ಟನೆ ನೀಡಿದರು.
ಗಣೇಶ್ ಹುಕ್ಕೇರಿ ಹೇಳಿದ್ದೇನು?
ಮಾಧ್ಯಮವೊಂದರ ಪ್ರತಿನಿಧಿ ಜೊತೆ ಮಾತನಾಡಿದ ಗಣೇಶ್ ಹುಕ್ಕೇರಿ ಅವರು 'ನಾನು ಜನವರಿ 19ರಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಲಿದ್ದಾನೆ. ಬೇರೆಯವರ ಹೆಸರು ಹೇಳಲ್ಲ. ನಾನಂತೂ ಬಿಜೆಪಿಗೆ ಹೋಗುತ್ತೇನೆ' ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.
ಎರಡು ಬಾರಿ ಶಾಸಕರಾಗಿ ಆಯ್ಕೆ
ಗಣೇಶ್ ಹುಕ್ಕೇರಿ ಅವರು 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗಣೇಶ್ ಹುಕ್ಕೇರಿ ಅವರು 94,636 ಮತಗಳನ್ನು ಪಡೆದು ಜಯಗಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ 91,467 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅವರನ್ನು ಮುಖ್ಯ ಸಚೇತಕರಾಗಿ ಆಯ್ಕೆ ಮಾಡಿದೆ.