ಯಮಕನಮರಡಿ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಗ್ರಾಮಕ್ಕೆ ನೀರು ಕಟ್
Recommended Video
ಬೆಳಗಾವಿ, ಜೂನ್ 15: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಹಾಕಿದ್ದರು ಎಂಬ ಕಾರಣಕ್ಕೆ ಗ್ರಾಮವೊಂದಕ್ಕೆ ಬರುತ್ತಿದ್ದ ಕುಡಿಯುವ ನೀರಿನ ಸರಬರಾಜನ್ನೇ ಸ್ಥಗಿತಗೊಳಿಸಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾರುತಿ ಅಷ್ಟಗಿ ಆರೋಪಿಸಿದ್ದಾರೆ.
ಯಮಕನಮರಡಿ ವಿಧಾನಸಭೆ ಕ್ಷೇತ್ರದ ಅಷ್ಟೇ ಎಂಬ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ದೂರಿದ್ದಾರೆ.
'ಜಯಮಾಲಾ ಯಾವ ಮಾನದಂಡದ ಮೇಲೆ ಸಚಿವರಾದರು?'
ಕಾಂಗ್ರೆಸ್ ಮುಖಂಡರು ಕುಡಿಯುವ ನೀರಿನ ಸರಬರಾಜು ಬಂದ್ ಮಾಡಿ ಅಮಾನವೀಯತೆ ಪ್ರದರ್ಶಿಸಿದ್ದಾರೆ. ಈ ಗ್ರಾಮದಲ್ಲಿ ಬಿಜೆಪಿ ಪರವಾಗಿ ಹೆಚ್ಚು ಮತಗಳು ಚಲಾವಣೆಯಾಗಿದ್ದರಿಂದ ಆ ಸೇಡಿಗೆ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕುಡಿಯುವ ನೀರು ನಿಲ್ಲಿಸಿರುವ ಸಂಬಂಧ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ನೀರು ಪೂರೈಕೆ ಆರಂಭವಾಗದಿದ್ದರೆ ಪಂಚಾಯಿತಿ ಎದುರಿಗೆ ಬೃಹತ್ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ ಮಾರುತಿ ಅಷ್ಟಗಿ ಅವರು ಬಿಜೆಪಿ ಅಭ್ಯರ್ಥಿಯಾಗಿ, ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ ಅವರ ಎದುರು ಸ್ಪರ್ಧಿಸಿದ್ದರು.
ಸತೀಶ್ ಜಾರಕಿಹೊಳಿ ಅವರು 73,512 ಮತಗಳನ್ನು ಪಡೆದಿದ್ದರೆ, ಮಾರುತಿ ಅಷ್ಟಗಿ 70,662 ಮತಗಳನ್ನು ಪಡೆದುಕೊಂಡಿದ್ದರು.
ತಮ್ಮನ್ನು ಗೆಲ್ಲಿಸಿದ್ದರೆ ಅಕ್ರಮ ಮರಳು ದಂದೆಗೆ ಅವಕಾಶ ನೀಡುವುದಾಗಿ ಚುನಾವಣೆ ಪ್ರಚಾರದ ವೇಳೆ ಹೇಳಿಕೆ ನೀಡುವ ಮೂಲಕ ಮಾರುತಿ ಅಷ್ಟಗಿ ಅವರು ವಿವಾದಕ್ಕೆ ಈಡಾಗಿದ್ದರು.