ವಾಟಾಳ್ ನಾಗರಾಜ್ ಅವರನ್ನು ಎತ್ತೊಯ್ದ ಪೊಲೀಸರು
ಬೆಳಗಾವಿ, ನವೆಂಬರ್ 22 : ಸುವರ್ಣಸೌಧದ ಒಳಗೆ ಇಂದು ಬಹುಮುಖ್ಯ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದರೆ ಹೊರಗೆ ಮಾಮೂಲಿನಂತೆ ವಿವಿಧ ಸಂಘಟನೆಗಳು ತಮ್ಮ ಒತ್ತಾಯ ಈಡೇರಿಕೆಗೆ ಪ್ರಭಟನೆ ನಡೆಸಿದವು.
ವಿಧಾನಸಭೆ ಕಲಾಪಗಳಿಗೂ ಪ್ರತಿಭಟನೆಗಳಿಗೂ ಬಿಡದ ನಂಟು, ಕಲಾಪಕ್ಕೆ ಪಕ್ಷಗಳು ಎರಡು ಮೂರು ತಿಂಗಳು ಇರುವಂತೆಯೇ ತಯಾರಿ ಮಾಡಿಕೊಂಡಂತಯೇ ಹೋರಾಟಗಾರರು ಕೂಡ ಕಲಾಪ ಆರಂಭವಾಗುವ ಬಹು ಮುಂಚೆಯೇ ಸಂಘಟನೆಯಲ್ಲಿ ತೊಡಗಿ ಹೋರಾಟದ ರೂಪು ರೇಷೆ ಅಂತಿಮಗೊಳಿಸಿಕೊಳ್ಳುತ್ತಾರೆ.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕಲಾಪದಷ್ಟೆ ಗಮನವನ್ನು ಪ್ರತಿಭಟನೆಗಳೂ ಸೆಳೆದವು ಅದರಲ್ಲಿಯೂ ಖಾಸಗಿ ವೈದ್ಯರು ಮಾಡಿದ ಮಾಡಿದ ಮುಷ್ಕರವಂತೂ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಯಿತು.
ವೈದ್ಯರ ಪ್ರತಿಭಟನೆ ಮುಖ್ಯವಾಹಿನಿಗೆ ಬಂದು ಅದರ ಬೆನ್ನ ಹಿಂದೆ ಪ್ರಮುಖ ಹೋರಾಟಗಳಾದ ಮಹದಾಯಿ ಹೋರಾಟ, ಒಳ ಮೀಸಲಾತಿ ಹೋರಾಟ, ಹಡಪದ ಹೋರಾಟಗಳು ಮುಚ್ಚಿಹೋದಂತೆ ಬಾಸವಾದವು.
ಸುವರ್ಣಸೌಧ ಮುತ್ತಿಗೆಗೆ ಯತ್ನ: ವಾಟಾಳ್ ಬಂಧನ
ಮಾಧ್ಯಮಗಳ ಕಣ್ಣು ಇವರ ಮೇಲೆ ಬೀಳಲಿಲ್ಲವೆಂದ ಮಾತ್ರಕ್ಕೆ ಪ್ರತಿಭಟನೆಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ ಇಂದು (ನವೆಂಬರ್ 22) ರಂದು ಯಾವ ಸಂಘಟನೆಗಳು ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಿದವು ತಿಳಿಯಲು ಮುಂದೆ ಓದಿ...
'ಉ.ಕ ಬಗ್ಗೆ ಚರ್ಚೆ ಆಗುತ್ತಿಲ್ಲ'
ಎಲ್ಲಾ ಕಾಲದ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಬಂದು ತಮ್ಮ ಪ್ರತಿಭಟನೆ ದಾಖಲಿಸಿದರು. 'ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಮರ್ಪಕವಾಗಿ ಚರ್ಚೆಯಾಗುತ್ತಿಲ್ಲ ಎಂದು ಆರೋಪಿಸಿ, ಮಹದಾಯಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಅವರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಮಯದಲ್ಲಿ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ 'ಎತ್ತೊಯ್ದರು'.
'ಶಾಸಕರ ಸದಸ್ಯತ್ವ ರದ್ದುಪಡಿಸಿ'
ಚಳಿಗಾಲದ ಅಧಿವೇಶನದಲ್ಲಿ, ಉತ್ತರ ಕರ್ನಾಕಟದ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚಿಸದ ಶಾಸಕರ ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಸಮಾಧಾನಪಡಿಸಿ ವಾಪಾಸ್ ಕಳಿಸಿದರು.
'ಎಲ್.ಆರ್. ವೈದ್ಯನಾಥನ್ ವರದಿ ಜಾರಿ ಮಾಡಿ'
ಪ್ರೊ.ಎಲ್.ಆರ್. ವೈದ್ಯನಾಥನ್ ವರದಿಯ ಶಿಪಾರಸಿನಂತೆ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಹಾಗೂ ನೇಮಕಾತಿ ನಿಯಮಾವಳಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಕರ ಸಂಘದವರು ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
ಆರ್ಥಿಕ ಹಾಗೂ ಸೇವಾ ಭದ್ರತೆ ಒದಗಿಸಿ
ವಿಶೇಷ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಶಿಕ್ಷಕರು, ವೃತ್ತಿಪರ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಶಿಕ್ಷಣ ಇಲಾಖೆಯ ವೇತನ ಅನುದಾನ ನೀತಿಯಂತೆಯೇ ಆರ್ಥಿಕ ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದವರು ಪ್ರತಿಭಟನೆ ನಡೆಸಿದರು.
ಅಭಿವೃದ್ಧಿ ನಿಗಮ ಸ್ಥಾಪಿಸಿ
ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಸಮುದಾಯಗಳ ಒಕ್ಕೂಟದವರು ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.