'ಕೇಂದ್ರ-ಗೋವಾ ಬಿಜೆಪಿ ನಾಯಕರಿಂದ ಮಹಾದಾಯಿ ರಾಜಕೀಯ'
ಬೆಳಗಾವಿ, ಜನವರಿ 13: ಮಹಾದಾಯಿ ವಿಚಾರದಲ್ಲಿ ಕೇಂದ್ರ, ಗೋವಾ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪೂರ ಆರೋಪಿಸಿದರು.
ಮಹಾದಾಯಿ ಕಾಮಗಾರಿ ಪ್ರದೇಶಕ್ಕೆ ಗೋವಾ ಅಧಿಕಾರಿಗಳ ಭೇಟಿ ವಿಚಾರವಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಅವರು, ನಾವು ರಾಜ್ಯದ ಹಿತಾಸಕ್ತಿ ಕಾಪಾಡುತ್ತಿದ್ದೇವೆ. ರಾಜ್ಯದ ಹಿತಕ್ಕಾಗಿ ಕೆಲವೊಂದು ವಿಚಾರ ಬಹಿರಂಗ ಪಡಿಸಲ್ಲ.ಆದರೆ ಮಹದಾಯಿ ವಿಚಾರದಲ್ಲಿ ಕೇಂದ್ರ, ಗೋವಾ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದರು.
ಮಹಾದಾಯಿ ವಿವಾದ, ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷದ ಸಭೆ: ಸಿಎಂ
ಗೋವಾ ಸಿಎಂ ಮನೋಹರ ಪರಿಕರ ರಕ್ಷಣಾ ಸಚಿವರಾಗಿ ಕೆಲಸ ಮಾಡಿದವರು, ಮಹದಾಯಿ ವಿಚಾರದಲ್ಲಿ ಸಂಕುಚಿತ ಮನೋಭಾವ ಪ್ರದರ್ಶಿಸಬಾರದು ಸಮುದ್ರಪಾಲಾಗುವ ನೀರನ್ನು ಕುಡಿಯಲು ನೀಡಬೇಕು. ಸಂಶಯದಿಂದ ಗೋವಾ ಅಧಿಕಾರಿಗಳ ತಂಡ ಕಣಕುಂಬಿಕೆ ಭೇಟಿ ನೀಡಿರಬಹುದು.
ಗೋವಾ ಸಿಎಂಗೆ ದೇವರು ಬುದ್ದಿಕೊಡಲಿ. ಮಹದಾಯಿ ವಿವಾದ ಪ್ರಧಾನಿ ಮೋದಿ ಇತ್ಯರ್ಥ ಪಡಿಸಬೇಕು. ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಬೇಕು. ನದಿ ಜೋಡಣೆಗಳ ಬಗ್ಗೆ ಮಾತಾಡೋ ಮೋದಿ ಮಹದಾಯಿ ವಿವಾದ ಬಗೆಹರಿಸಲಿ ಎಂದು ಸಚಿವ ತಿಮ್ಮಾಪುರ ಕಿಡಿಕಾರಿದರು.
ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವಾಗಿ ನಿತ್ಯ ರೈತರ ಹೋರಾಟಗಳು ನಡೆಯುತ್ತಲೇ ಇದೆ. ಡಿಸೆಂಬರ್ ನಲ್ಲಿ ಮಹಾದಾಯಿಗಾಗಿ ಉತ್ತರ ಕರ್ನಾಟಕದ ಬಂದ್ ಕೂಡ ನಡೆದಿದೆ. ಏನೇ ಆದರೂ ವಿಚಾರ ಮಾತ್ರ ಇತ್ಯರ್ಥವಾಗುತ್ತಿಲ್ಲ, ಇದೀಗ ಜನವರಿ ೨೫ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.