ಸರ್ಕಾರಿ ಶಾಲೆಯಲ್ಲೇ ಕಡ್ಡಾಯ ಕಲಿಕೆ : ಮಸೂದೆ ಮುಂದಕ್ಕೆ
ಬೆಳಗಾವಿ, ನವೆಂಬರ್ 24 : ಮುಂದಿನ ಅಧಿವೇಶನದಲ್ಲಿ ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಶುಕ್ರವಾರ ವಿಧಾನ ಪರಿಷತ್ ನಲ್ಲಿ ಭರವಸೆ ನೀಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ತೊಡಿಸಲು ಸರಕಾರ ಮುಂದಾಗಲಿ
ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಡಿ ಎಂದು ಸಭಾಪತಿ ಪೀಠದ ಮುಂದೆ ರಘು ಆಚಾರ್ಯ ಅವರು ಧರಣಿ ನಡೆಸುತ್ತಿದ್ದರು. ಎಂಎಲ್ ಸಿ ರಘು ಆಚಾರ್ ಅವರು ನೀಡಿದ ವಿದೇಯಕ ಪಾರ್ಲಿಮೆಂಟರಿ ಅಫೇರ್ಸ್ ಕಮಿಟಿಯಲ್ಲಿದೆ ಹಾಗಾಗಿ ವಿಧೇಯಕ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಸಭಾಪತಿ ಡಿ.ಎಚ್. ಶಂಕರ್ ಮೂರ್ತಿಯವರು ಹೇಳಿದರು.
ತನ್ವೀರ್ ಸೇಠ್ ಮಾತನಾಡಿ, ರಘು ಆಚಾರ್ ಅವರ ವಿಚಾರ ಬಹಳ ಮಹತ್ವದ್ದಾಗಿದೆ. ಈ ಕುರಿತು ಅನೇಕ ವರದಿಗಳು ಸರ್ಕಾರಕ್ಕೆ ಬಂದಿದೆ. ಸರ್ಕಾರ ವಿಧೇಯಕಕ್ಕೆ ಬೆಂಬಲ ನೀಡಿದೆ. ಈ ವಿಧೇಯಕದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಈಗ ಅವರು ಹಠ ಮಾಡುತ್ತಿರುವುದು ಸರಿಯಲ್ಲ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದರು.