ಎರಡಾಳೆತ್ತೆರ ಬೆಳೆದಿದ್ದ ಕಬ್ಬು ಬೆಂಕಿಗಾಹುತಿ, ಮುಗಿಲು ಮುಟ್ಟಿದ ರೈತನ ಗೋಳು
ಬೆಳಗಾವಿ, ಡಿಸೆಂಬರ್ 01 : ಗೋಕಾಕ ತಾಲೂಕು ಹೂಲಿಕಟ್ಟಿ ಗ್ರಾಮದ ಕಬ್ಬುಬೆಳೆಗಾರ ರತ್ನಪ್ಪ ಕಲ್ಲಪ್ಪ ಗೋಣಿ ಎಂಬುವರು ಹುಲುಸಾಗಿ ಕಬ್ಬು ಬೆಳೆದಿದ್ದರು. ಕಟಾವಿಗೆ ಹತ್ತಿರ ಬಂದಿದ್ದ ಫಸಲು ನೋಡಿ, ಬೆಳೆಗೆಂದು ಮಾಡಿದ್ದ ಸಾಲ ತೀರಿಸಿ ಲಾಭವನ್ನೂ ಗಳಿಸುವ ಉಮೇದಿನಲ್ಲಿದ್ದರು ಆದರೆ ವಿಧಿಯಾಟ ಬೇರೆಯೇ ಇತ್ತು.
ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ಕಳೆದ ಮಂಗಳವಾರ (ನವೆಂಬರ್ 28) ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ರತ್ನಪ್ಪ ಕಲ್ಲಪ್ಪ ಗೋಣಿ ಎಂಬ ರೈತರ ಸುಮಾರು 13 ಎಕರೆಯಲ್ಲಿ ಜತನದಿಂದ ಬೆಳಿಸಿದ್ದ ಕಟಾವಿಗೆ ಬಂದಿದ್ದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ. ತಿಂಗಳಾನುಗಟ್ಟಲೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ಫಸಲು ರೈತನ ಕಣ್ಣ ಮುಂದೆಯೇ ಕ್ಷಣದಲ್ಲಿ ಉರಿದು ಬೂದಿಯಾಗಿಬಿಟ್ಟಿದೆ.
ಬದುಕಿಗೆಂದು ಬೆಳೆದಿದ್ದ ಕಬ್ಬು ಕಣ್ಣ ಮುಂದೆಯೇ ಬೂದಿಯಾಗಿದ್ದನ್ನು ಕಂಡು ಕುಮುಲಿ ಹೋದ ರೈತ ರತ್ನಪ್ಪ ಕಲ್ಲಪ್ಪ ಗೋಣಿ ಅವರನ್ನು ಗ್ರಾಮಸ್ಥರು ಸಮಾಧಾನ ಪಡಿಸಿ ನ್ಯಾಯ ಕೇಳಲೆಂದು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಆದರೆ ಡಿ.ಸಿ ಸಿಗದ ಕಾರಣ, ಸುಟ್ಟ ಕಬ್ಬನ್ನು ಹಿಡಿದು ಅಲ್ಲೆ ಪ್ರತಿಭಟನೆ ಮಾಡಿ, ಬಲವಂತವಾಗಿ ನೂರಾರು ರೈತರು ಡಿ.ಸಿ ಕಚೇರಿ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ.
ಕೊನೆಗೆ ಹೊರಬಂದ ಜಿಲ್ಲಾಧಿಕಾರಿಗೆ ದೂರುಗಳ ಸುರಿಮಳೆ ಸುರಿಸಿದ ರೈತರು, ಅನಾಹುತ ಸಂಭವಿಸಿ ಮೂರು ದಿನವಾದರೂ ಸ್ಥಳೀಯ ಗೋಕಾಕ ತಹಶೀಲ್ದಾರ, ಹೆಸ್ಕಾಂ ಅಧಿಕಾರಿಗಳು ಕೊನೆಪಕ್ಷ ಸಕ್ಕರೆ ಕಾರ್ಖಾನೆಗಳು ಸ್ಪಂದಿಸದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಪರಿಹಾರ ನೀಡದಿದ್ದಲ್ಲಿ ಹೆಂಡತಿ ಮಕ್ಕಳೊಂದಿಗೆ ಇಲ್ಲಿಯೇ ವಿಷ ಸೇವಿಸುವುದಾಗಿ ರೈತ ರತ್ನಪ್ಪ ಎಚ್ಚರಿಸಿದ್ದಾರೆ.
ರೈತನನ್ನು ಸಮಾಧಾನಪಡಿಸಿದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಆತ್ಮಹತ್ಯೆಯ ಎಚ್ಚರಿಕೆ ನೀಡುವುದು ಸೂಕ್ತವಲ್ಲ, ಈ ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾಗಬಾರದೆಂದು ತಿಳಿ ಹೇಳಿ ತ್ವರಿತವಾಗಿ ಸೂಕ್ತ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.