ಜಯನಗರದಿಂದ ಸ್ಪರ್ಧಿಸಲು ನನ್ನ ಮಗಳು ಸಿದ್ಧ: ರಾಮಲಿಂಗಾರೆಡ್ಡಿ
ಬೆಳಗಾವಿ, ನವೆಂಬರ್ 23: 'ನನ್ನ ಮಗಳು ನನ್ನ ಹಳೆ ಮತಕ್ಷೇತ್ರ ಜಯನಗರದಿಂದ ಟಿಕೆಟ್ ಕೇಳುತ್ತಿದ್ದಾಳೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟರೆ ನಿಲ್ಲುತ್ತಾಳೆ' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತೆ ಸಿದ್ದರಾಮಯ್ಯ ಅವರೇ ಸಿಎಂ ಆಗ್ತಾರೆ ಎಂದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಗುಣವಿದ್ದವರು ರಾಜಕೀಯದಲ್ಲಿ ತುಂಬಾ ದಿನ ಇರ್ತಾರೆ. ಜಯನಗರ ಕ್ಷೇತ್ರದಲ್ಲಿ ನನ್ನ ಮಗಳಿಗೆ ಟಿಕೆಟ್ ನೀಡದೆ ಬೇರೆಯವರಿಗೆ ನೀಡಿದರೂ ನಾನು ಬೆಂಬಲಿಸುತ್ತೇನೆ.
ಆದರೆ, ನನ್ನ ಮಗಳು ಸೌಮ್ಯ ರೆಡ್ಡಿಗೆ ಟಿಕೆಟ್ ಕೊಟ್ಟರೆ ಜಯನಗರದಿಂದ ಚುನಾವಣೆಗೆ ನಿಲ್ಲುತ್ತಾಳೆ. ಮಗಳಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಒತ್ತಡ ಹಾಕುವುದಿಲ್, ಇದಕ್ಕಾಗಿ ನಾವು ಲಾಬಿ ಮಾಡುತ್ತಿಲ್ಲ ಎಂದರು.
ರಾಜಕೀಯದಲ್ಲಿ ನಾಯಕತ್ವ ಗುಣ ಇರಬೇಕು. ನನ್ನ ಮಗಳಿಗೆ ಅರ್ಹತೆಯಿದ್ದರೆ ಟಿಕೆಟ್ ಕೊಡಬೇಕು. ಬಲವಂತವಾಗಿ ಟಿಕೆಟ್ ನೀಡಿದರೆ, ಒಂದೇ ಸಾರಿಗೆ ಹೋಗಿ ಬಿಡುತ್ತಾರೆ, ಅರ್ಹತೆ, ಪ್ರತಿಭೆ ಇದ್ದವರು ಇಲ್ಲಿ ಉಳಿಯುತ್ತಾರೆ ಎಂದು ಹೇಳಿದರು.
ಸೌಮ್ಯ ರೆಡ್ಡಿ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಬೆಂಗಳೂರು ನಗರ)ಯ ಉಪಾಧ್ಯಕ್ಷೆಯಾಗಿದ್ದಾರೆ. ಉದ್ಯಮಿ, ಮಾನವ ಹಕ್ಕುಗಳು, ಪ್ರಾಣಿ ಹಾಗೂ ಪರಿಸರ ಸಂರಕ್ಷಣೆ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.