ಎಲ್ಲಾ ಕಳ್ಳರು ಸೇರಿ ಸರ್ಕಾರ ರಚಿಸುತ್ತಿದ್ದಾರೆ: ಸಂಜಯ ಪಾಟೀಲ್
ಬೆಳಗಾವಿ, ಮೇ 23 : ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ ಆಗುತ್ತಿದ್ದು, ಈ ಮ್ಯಾರೇಜ್ ಅನಧಿಕೃತವಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದು ತಂದೆ, ತಾಯಿ ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್ ಎಂದು ವ್ಯಂಗ್ಯವಾಡಿರುವ ಅವರು ಕರ್ನಾಟಕದ ಜನತೆಗೆ ಈ ಮೈತ್ರಿ ಸರ್ಕಾರ ಒಪ್ಪಿಗೆ ಇಲ್ಲ. ಕುಮಾರಸ್ವಾಮಿ ವಚನ ಭ್ರಷ್ಟ, ಸಿದ್ದರಾಮಯ್ಯ ಮೋಸಗಾರ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ಗೆ ಆನೆ ಜತೆ ಲವ್, ಕಾಂಗ್ರೆಸ್ ಜತೆ ಮದುವೆ: ಅಶೋಕ್ ಲೇವಡಿ
ಡಿ.ಕೆ.ಶಿವಕುಮಾರ್ ಅಂತಹ ದೊಡ್ಡ ಕಳ್ಳ ದೇಶದಲ್ಲಿ ಯಾರು ಇಲ್ಲ. ಇವತ್ತು ಎಲ್ಲಾ ಕಳ್ಳರು ಸೇರಿ ಬಿಜೆಪಿ ದೂರವಿಟ್ಟು ಸರ್ಕಾರ ರಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ 6 ತಿಂಗಳಲ್ಲಿ ಡೈವರ್ಸ್ ಆಗುತ್ತೆ.
ಮತ್ತೆ ರಾಜ್ಯದಲ್ಲಿ ಬಿಎಸ್ ವೈ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಜಯ ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ಸಂಜಯ ಪಾಟೀಲ್ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ "ಈ (ಕರ್ನಾಟಕ ವಿಧಾನಸಭೆ) ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ನಡೆಯುತ್ತಿಲ್ಲ. ಇದು ಹಿಂದೂ-ಮುಸ್ಲಿಮರ ನಡುವಿನ ಚುನಾವಣೆ, ರಾಮ ಮಂದಿರ -ಬಾಬ್ರಿ ಮಸೀದಿಯ ಮಧ್ಯದ ಚುನಾವಣೆ," ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.