ಧಾರವಾಡ: ನಿರ್ಮಾಪಕ ಆನಂದ್ ಅಪ್ಪುಗೋಳ್ ಗೆ ಜಾಮೀನು
ಧಾರವಾಡ, ನವೆಂಬರ್ 09: ಕನ್ನಡ ಸಿನಿಮಾ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಕೋ-ಆಪ್ ಕ್ರೆಡಿಟ್ ಸೊಸೈಟಿಯ 300 ಕೋಟಿ ರು ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟಿನಿಂದ ಮಹತ್ವದ ತೀರ್ಪು ಪ್ರಕಟವಾಗಿದೆ.
ಸಂಗೊಳ್ಳಿ ರಾಯಣ್ಣ ಸೊಸೈಟಿ ಅವ್ಯವಹಾರ ಸಿಐಡಿ ತನಿಖೆಗೆ?
ಈ ಪ್ರಕರಣದ ಪ್ರಮುಖ ಆರೋಪಿ ಆನಂದ್ ಅಪ್ಪುಗೋಳ್ ಅವರಿಗೆ ಗುರುವಾರದಂದು ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೊಸೈಟಿ ಅಧ್ಯಕ್ಷರಾಗಿರುವ ಅಪ್ಪುಗೋಳ ವಿರುದ್ಧ ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಐದು ಲಕ್ಷ ರೂ ಬಾಂಡ್, ಇಬ್ಬರ ಶ್ಯೂರಿಟಿ, ಕೋರ್ಟ್ ಅನುಮತಿ ಇಲ್ಲದೇ ಬೆಳಗಾವಿ ಜಿಲ್ಲೆ ಬಿಡುವಂತಿಲ್ಲ ಹಾಗೂ ಹದಿನೈದು ದಿನಕ್ಕೊಮ್ಮೆ ಠಾಣೆಗೆ ಹಾಜರಾಗುವಂತೆ ಷರತ್ತು ವಿಧಿಸಿ ಧಾರವಾಡದ ಹೈಕೊರ್ಟ್ ಜಾಮೀನು ಮಂಜೂರು ಮಾಡಿದೆ.
ದರ್ಶನ್ ಅಭಿನಯದ ರಾಜ್ಯ ಪ್ರಶಸ್ತಿ ವಿಜೇತ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ನಿರ್ಮಾಪಕರಾದ ಆನಂದ್ ಅವರ ಈ ಸಹಕಾರಿ ಬ್ಯಾಂಕ್ 15ಕ್ಕೂ ಅಧಿಕ ವರ್ಷಗಳಿಂದ 40ಕ್ಕೂ ಅಧಿಕ ಬ್ರ್ಯಾಂಚ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕೆಲ ತಿಂಗಳುಗಳಿಂದ ಬ್ಯಾಂಕ್ ತನ್ನ ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಹಣವನ್ನು ಆನಂದ್ ಅವರು ಬೇರೆ ವ್ಯವಹಾರಕ್ಕೆ ಬಳಸಿರುವ ಬಗ್ಗೆ ಮಾಹಿತಿ ಬಹಿರಂಗವಾದ ಹಿನ್ನಲೆಯಲ್ಲಿ ಗ್ರಾಹಕರ ಆತಂಕಕ್ಕೆ ಒಳಗಾಗಿದ್ದಾರೆ.