ಬೆಳಗಾವಿ : ಸಹಕಾರಿ ಸಂಘದ ಹಣ ಕೊಡಿಸುವಂತೆ ಡಿಸಿಗೆ ಮನವಿ
ಬೆಳಗಾವಿ, ಆಗಸ್ಟ್.23 : ಸಹಕಾರಿ ಸಂಘದಲ್ಲಿ ಹಣ ಹೂಡಿಕೆ ಮಾಡಿರುವ ನೂರಾರು ಜನರು ತಮ್ಮ ಹಣ ವಾಪಸ್ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಅವಧಿ ಮುಗಿದರೂ ತಮ್ಮ ಹಣ ವಾಪಸ್ ಸಿಕ್ಕಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ದರ್ಶನ್ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೊಳ್ ಕಣ್ಣೀರಧಾರೆ
ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದಲ್ಲಿ ಹಣ ಹೂಡಿಕೆ ಮಾಡಿದವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಸ್ವಾಮಿ ವಿವೇಕಾನಂದ ರಸ್ತೆಯಿಂದ ಡಿಸಿ ಕಚೇರಿ ತನಕ ಪಾದಯಾತ್ರೆ ನಡೆಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಿಸಿದ್ದ ಆನಂದ್ ಅಪ್ಪುಗೋಳ್, ಅವರು ಈ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕರು. ಸೊಸೈಟಿಯಲ್ಲಿ ಹಲವು ಜನರು ಹಣ ಹೂಡಿಕೆ ಮಾಡಿದ್ದು, ಅವಧಿ ಮುಗಿದರೂ ಹೂಡಿಕೆ ಮಾಡಿರುವ ಹಣ ವಾಪಸ್ ಸಿಕ್ಕಿಲ್ಲ.
ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ್ದ ಆನಂದ್ ಅಪ್ಪುಗೋಳ್ ನೋಟುಗಳ ರದ್ಧತಿ ಬಳಿಕ ಸೊಸೈಟಿಗೆ ನಷ್ಟ ಉಂಟಾಗಿದೆ ಎಂದು ಹೇಳಿದ್ದರು. ಸಹಕಾರಿ ಸಂಘದಲ್ಲಿ ಹೂಡಿಕೆ ಮಾಡಿರುವ ಹಣ ಬೇರೆ ಉದ್ದೇಶಕ್ಕೆ ಬಳಕೆ ಆಗಿಲ್ಲ, ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಹಲವಾರು ಜನರು ತಮ್ಮ ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದ್ದರು. ಜಿಲ್ಲಾಧಿಕಾರಿಗಳು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಹಣ ವಾಪಸ್ ಕೊಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.