ಗಡಸುತನ, ವ್ಯಂಗ್ಯ ಬಿಟ್ಟು ಭಾವುಕರಾದ ರಮೇಶ್ ಕುಮಾರ್!
ಬೆಳಗಾವಿ, ನವೆಂಬರ್ 14 : ವೈದ್ಯಕೀಯ ನಿಯಂತ್ರಣ ವಿಧೇಯಕ ಮಂಡನೆ ಮತ್ತು ಖಾಸಗಿ ವೈದ್ಯರುಗಳ ಪ್ರತಿಭಟನೆ ಬಗ್ಗೆ ನಿನ್ನೆ ಏನೂ ಮಾತನಾಡದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಇಂದು (ನವೆಂಬರ್ 14) ಸದನದಲ್ಲಿ ಮೌನ ಮುರಿದಿದ್ದಾರೆ.
ಸಚಿವ ಸ್ಥಾನ ತೊರೆಯುವ ಬೆದರಿಕೆ ಹಾಕಿದ ರಮೇಶ್ ಕುಮಾರ್?
ಖಾಸಗಿ ವೈದ್ಯಕೀಯ ತಿದ್ದುಪಡಿ ವಿಧೇಯಕ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಮಹಾಂತೇಶ್ ಕೌಟಗಿಮಠ ಅವರ ಪ್ರಶ್ನೆಗೆ ಉತ್ತರ ನೀಡಿದ ರಮೇಶ್ ಕುಮಾರ್, ವೈದ್ಯರ ಪ್ರತಿಭಟನೆಯಿಂದಾಗಿ ಮೂರು ಜನರ ಜೀವ ಹೋಗಿರುವುದು ಗಮನಕ್ಕೆ ಬಂದಿದೆ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಮೃತರ ಕುಟುಂಬದಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು.
ತಮ್ಮ ಎಂದಿನ ಗಡಸು, ವ್ಯಂಗ್ಯದ ಶೈಲಿ ಬಿಟ್ಟು ಭಾವುಕರಾಗಿ ಮಾತನಾಡಿದ ರಮೇಶ್ ಕುಮಾರ್ ಅವರು ತಾವು ಈ ವಿಧೇಯಕ ಮಂಡನೆ ಮಾಡಲು ಮುಂದಾಗಿದ್ದಕ್ಕೆ ಪುಟ್ಟಪರ್ತಿ ಸಾಯಿಬಾಬಾ ಅವರೇ ಕಾರಣ ಎಂದರು. ಪುಟ್ಟಪರ್ತಿಯಲ್ಲಿಯಂತೆಯೇ ನಾವು ಯಾಕೆ ಕಡಿಮೆ ಬೆಲೆಯಲ್ಲಿ ಸೇವೆ ಕೊಡಬಾರದು ಎಂದು ಚಿಂತಿಸಿದ್ದೇನೆ, ಆದರೆ ನನ್ನನ್ನ ಕೊಲೆಗಡಕು, ಮಕ್ಕಳಿಲ್ಲ ಎಂದೆಲ್ಲ ಹೇಳಿದ್ದಾರೆ ಎಂದು ಕಣ್ಣಾಲಿಗಳಲ್ಲಿ ನೀರು ತಂದುಕೊಂಡರು.
ಮುಂದುವರೆದ ವೈದ್ಯರ ಧರಣಿ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ನಾನು ತರಲಿಚ್ಛಿಸಿರುವ ವಿಧೇಯಕ ಜನವಿರೋಧಿಯೇ ಅಲ್ಲವೇ ಎಂಬುದನ್ನು ಆರ್.ಆರ್.ಎಸ್ ಮುಖಂಡರ ಸಭೆ ಕರೆದು ಅವರ ಮುಂದಿಡಿ. ವಿಧೇಯಕವನ್ನು ಅವರು ಜನವಿರೋಧಿ ಎಂದು ಒಪ್ಪಿಕೊಂಡರೆ ನಾನು ರಾಜಿನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ರಮೇಶ್ ಕುಮಾರ್ ಅವರು ಬಿ.ಜೆ.ಪಿ ಸದಸ್ಯರಿಗೆ ಸವಾಲ್ ಹಾಕಿದರು.
ಈಶ್ವರಪ್ಪನವರು ನನ್ನನ್ನು ಕೊಲೆಗಡುಕ ಎಂದಿದ್ದಾರೆ. ನಾನು ಕೊಲೆಗಡುಕ ಎನ್ನುವುದಕ್ಕೆ ಅವರಲ್ಲಿ ಸಾಕ್ಷಿಗಳೇನಾದರು ಇದ್ದರೆ ತೋರಿಸಲಿ, ಯಾವ ಠಾಣೆಯಲ್ಲಿ ನನ್ನ ವಿರುದ್ಧ ಕೇಸು ದಾಖಲಾಗಿದೆ ತೋರಿಸಲಿ. ಸೂಕ್ತ ಚಿಕಿತ್ಸೆ ದೊರೆಯದೆ ಮಡಿದ ಆ ಮೂರು ಜನರಿಗೆ ನನ್ನ ಸಂತಾಪ ಇದೆ. ನನ್ನ ಕಾರಣದಿಂದ ಅವರ ಜೀವ ಹೋಯಿತೆಂದು ನೆನೆದು ರಾತ್ರಿ ಎಲ್ಲ ನಿದ್ದೆ ಬರಲಿಲ್ಲ ಎಂದು ಅವರು ಹೇಳಿದರು.