ರಾಹುಲ್ ಗಾಂಧಿ ಮಾತಿನ ಶೈಲಿ ಬದಲಾಗಿದೆಯೆ?
ಬೆಳಗಾವಿ, ಫೆಬ್ರವರಿ 24: ರಾಹುಲ್ ಗಾಂಧಿ ಮಾತು ಮೊಳೆ ಹೊಡೆದಂತೆ ಎಂಬುದು ಮುಂಚೆ ಇದ್ದ ಜೋಕು, ಈಗಲೂ ಆ ಜೋಕು ಚಾಲ್ತಿಯಲ್ಲಿಯೇ ಇದೆ. ಆದರೆ ಇತ್ತೀಚೆಗೆ ತಾವೂ ಒಬ್ಬ ಸಂವಹನಕಾರ ಎಂದು ಸಾಬೀತುಪಡಿಸಿಕೊಳ್ಳಲು ರಾಹುಲ್ ಪ್ರಯತ್ನ ಪಡುತ್ತಿರುವುದು ಸುಲಭವಾಗಿ ಗುರುತಿಸಬಹುದು.
ಅವರ ಗಬ್ಬರ್ ಸಿಂಗ್ ಟ್ಯಾಕ್ಸ್ ಹೇಳಿಕೆ, ಟ್ವಿಟ್ಟರ್ನಲ್ಲಿ ಶಾಯರಿಗಳು, ರಿಯರ್ ಮಿರರ್ ಡ್ರೈವಿಂಗ್ ಹೇಳಿಕೆಗಳು ಇದಕ್ಕೆಲ್ಲಾ ಸಾಕ್ಷಿ. ಗುಜರಾತ್ ಸಮಯದಲ್ಲಿ ಅವರು ಮಾಡಿದ ಭಾಷಣಗಳು ಅತ್ಯುತ್ತಮ ಎನಿಸಿಕೊಳ್ಳದಿದ್ದರು ರಾಹುಲ್ ಅವರ ಭಾಷಣಕ್ಕೆ ಹೊಸ ಹೊಳಪು ಸಿಕ್ಕಿರುವುದು ಸ್ಪಷ್ಟವಾಯಿತು.
ಇಂದು ಬೆಳಗಾವಿಯ ಅಥಣಿಯ ಜನಾಶೀರ್ವಾದ ಯಾತ್ರೆಯಲ್ಲಿ ಅವರು ಮಾಡಿದ ಭಾಷಣ ಕ್ರಾಂತಿಕಾರಿಯೋ, ಪ್ರಭಾವಕಾರಿಯೋ ಅಲ್ಲದೆ ಇದ್ದರೂ ಕೂಡ ಅವರ ಮಾತಿನಲ್ಲಿ ಖಚಿತತೆ ಗುರುತಿಸುವಷ್ಟರ ಮಟ್ಟಿಗೆ ಢಾಳಾಗಿತ್ತು. ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಸ್ಪಷ್ಟ ರೇಖೆಯೊಂದನ್ನು ಎಳೆದಂತೆ ಮಾತನಾಡಿದರು.
'ಚೆನ್ನಾಗಿದ್ದಾರಾ'
ದಕ್ಷಿಣದ ರಾಜ್ಯದ ಪ್ರಾದೇಶಿಕತೆಯ ಒಲವು ಹೆಚ್ಚು ಎಂಬುದು ಮೋದಿವರಿಗೆ ಚೆನ್ನಾಗಿ ಅರಿವಿದೆ ಹಾಗಾಗಿ ಅವರು ಬಂದಾಗಲೆಲ್ಲಾ ಇಲ್ಲಿನ ಸ್ಥಳೀಯ ವಿಷಯಗಳನ್ನೆ ಮೊದಲು ಪ್ರಸ್ತಾಪಿಸುತ್ತಾರೆ. ಇದೇ ಹಾದಿಯನ್ನು ಇಂದು ರಾಹುಲ್ ಅನುಸರಿಸಿದರು, ಅವರು ಭಾಷಣ ಪ್ರಾರಂಭಿಸಿದ್ದು ಕನ್ನಡದಲ್ಲಿ. 'ಚೆನ್ನಾಗಿದ್ದೀರಾ' ಎಂದು ಕೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಕಾಯಕ ಯೋಗಿಯ ಜಪ
ಇಂದಿನ ರಾಹುಲ್ ಭಾಷಣದ ಪ್ರಮುಖ ಅಂಶ ಬಸವಣ್ಣನ ಜಪ. ಬಸವಣ್ಣ ಹುತ್ತರ ಕರ್ನಾಟಕದ ಮಂದಿಗೆ ಕೇವಲ ದೇವರನ್ನೂ ಮೀರಿದವ. ಅಷ್ಟೆ ಅಲ್ಲದೆ ಆತ ಕಾಯಕ ಯೋಗಿ. ಬಸವಣ್ಣನ ವಚನ, ಮಾತುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸಮೀಕರಿಸಿದ ರಾಹುಲ್ ತಾವು ತಮ್ಮ ಪಕ್ಷ ಬಸವಣ್ಣನ ಅನುಯಾಯಿಗಳು ಎಂಬುದಾಗಿ ತೋರಿಸಿಕೊಂಡರು.
ಕಾಂಗ್ರೆಸ್ ಹೀಗೆ, ಬಿಜೆಪಿ ಹಾಗೆ
ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ಸ್ಪಷ್ಟಪಡಿಸಲು ಯತ್ನಿಸಿದರು. ಅವರು ದ್ವೇಷ ಹರಡಿಸುತ್ತಾರೆ ನಾವು ಪ್ರೀತಿಯ ಮಾತನಾಡುತ್ತೇವೆ, ಅವರಿಗೆ ಕೋಪ ಹೆಚ್ಚು ಪ್ರಶ್ನಿಸಿದರೂ ಅವರು ಕೋಪಗೊಳ್ಳುತ್ತಾರೆ, ಆದರೆ ನಾವು ಪ್ರಶ್ನೆಯನ್ನೂ ಪ್ರೀತಿಯಿಂದಲೇ ಕೇಳುತ್ತೇವೆ ಎಂದು ಬಿಜೆಪಿಯ ಅಸಹಿಷ್ಣುತೆ ಮತ್ತು ಕಾಂಗ್ರೆಸ್ನ ಸರ್ವಜನ ಪ್ರೀತಿ ಬಗ್ಗೆ ತಿಳಿ ಹೇಳಿದರು.
ಸತ್ಯವನ್ನೇ ಮುಂದಿಡುತ್ತೇವೆ
ಕಾಂಗ್ರೆಸ್ ನಾಯಕರು ಎಂದೂ ಅಸಂಬಂದ್ಧವಾಗಲಿ, ಕೆಟ್ಟ ಮಾತುಗಳನ್ನಾಗಲಿ ಆಡುವುದಿಲ್ಲ ಎಂದ ರಾಹುಲ್ ಬಿಜೆಪಿಯವರ ಮುಸ್ಲಿಂ ಕುರಿತ ಹೇಳಿಕೆಗಳು, ಮಹಿಳೆ ಕುರಿತ ಹೇಳಿಕೆಳ ಬಗ್ಗೆ ಹೆಸರೆತ್ತದೆ ಟಾಂಗ್ ನೀಡಿದರು. ನಾವು ಸುಳ್ಳು ಭರವಸೆ ಕೊಟ್ಟು ಓಟು ಹಾಕಿಸಿಕೊಳ್ಳುವುದಿಲ್ಲ ಎಂದ ರಾಹುಲ್ ಪರೋಕ್ಷವಾಗಿ ಮೋದಿ ಅವರ ಕಾಲೆಳೆದರು. 15 ಲಕ್ಷದ ವಿಷಯವನ್ನೂ ಪ್ರಸ್ತಾಪಿಸಿದ ಅವರು ಮೋದಿ ಅವರನ್ನು ಸುಳ್ಳುಗಾರ ಎಂದರು.