ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಕೊಲೆಗೆ ಯತ್ನಿಸಿದ್ದ ಆರೋಪಿಗಳ ಬಂಧನ
ಬೆಳಗಾವಿ, ಜುಲೈ 30: ಸವದತ್ತಿಯ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಸವದತ್ತಿ ಪೋಲಿಸರು ಬಂಧಿಸಿದ್ದು ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ಯತ್ನ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮಂಜು ಪಚಂಗಿ, ಸುನೀಲ್ ತಾರೀಹಾಳ ಮತ್ತು ಬಸವರಾಜ ಅರಮಾನಿ ಬಂಧಿತ ಆರೋಪಿಗಳು. ಬಂಧಿತರೆಲ್ಲರು ಸವದತ್ತಿ ಮೂಲದವರಾಗಿದ್ದಾರೆ.
ಕಾಂಗ್ರೆಸ್ 'ರೆಬೆಲ್' ಆನಂದ್ ಚೋಪ್ರಾ ಮೇಲೆ ಮಾರಣಾಂತಿಕ ಹಲ್ಲೆ
ಆರೋಪಿಗಳು ಹಾಗೂ ಆನಂದ ಚೋಪ್ರಾ ಮಧ್ಯೆ ಹಣಕಾಸಿನ ವಿಚಾರವಾಗಿ ಮನಸ್ತಾಪವಿತ್ತು ಎಂದು ತಿಳಿದು ಬಂದಿದೆ. ಮೊನ್ನೆಯಷ್ಟೇ ರಾತ್ರಿ 10.30 ಸುಮಾರು ಸವದತ್ತಿಯಲ್ಲಿ ಆನಂದ ಚೋಪ್ರಾ ಹತ್ಯೆಗೆ ಯತ್ನ ನಡೆಸಿದ್ದರು.
ಆನಂದ ಚೋಪ್ರಾ ಅವರ ಮೇಲೆ ಮಾರಕಾಸ್ತ್ರಗಳಿಂದ ಆರೋಪಿಗಳು ಹಲ್ಲೆ ನಡೆಸಿ ಪರಾರಿ ಆಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದ ಚೋಪ್ರಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಅದೃಷ್ಟವಷಾತ್ ಆನಂದ್ ಚೋಪ್ರಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸವದತ್ತಿ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಆನಂದ್ ಚೋಪ್ರಾ ಅವರು ಕಣಕ್ಕಿಳಿದು ಕೇವಲ 6000 ಮತಗಳ ಅಂತರದಿಂದ ಸೋತಿದ್ದರು.