ಇದು ಹಿಂದೂ-ಮುಸ್ಲಿಮರ ನಡುವಿನ ಚುನಾವಣೆ: ಬಿಜೆಪಿಯ ಸಂಜಯ್ ಪಾಟೀಲ್ ವಿವಾದ
ಬೆಳಗಾವಿ, ಎಪ್ರಿಲ್ 19: ಚುನಾವಣೆ ಬರುತ್ತಿದ್ದಂತೆ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವೈಷಮ್ಯ ಬಿತ್ತಲು ಕೊಳಕು ರಾಜಕಾರಣಿ ಮುಂದಾಗುತ್ತಾರೆ.
ಇದೀಗ ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿದೆ ಎನ್ನುವಾಗ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ಈ (ಕರ್ನಾಟಕ ವಿಧಾನಸಭೆ) ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ನಡೆಯುತ್ತಿಲ್ಲ. ಇದು ಹಿಂದೂ-ಮುಸ್ಲಿಮರ ನಡುವಿನ ಚುನಾವಣೆ, ರಾಮ ಮಂದಿರ -ಬಾಬ್ರಿ ಮಸೀದಿಯ ಮಧ್ಯದ ಚುನಾವಣೆ," ಎಂದು ಪಾಟೀಲ್ ಉಗ್ರ ಭಾಷಣ ಬಿಗಿದಿದ್ದಾರೆ.
ಮುಂದುವರಿದು ಮಾತನಾಡಿದ ಅವರು "ನಾನು ಸಂಜಯ್ ಪಾಟೀಲ್, ನಾನು ಹಿಂದು. ಇದು ಹಿಂದೂ ರಾಷ್ಟ್ರ ಮತ್ತು ನಾವು ರಾಮ ಮಂದಿರವನ್ನು ಕಟ್ಟಲು ಇಚ್ಛಿಸಿದ್ದೇವೆ," ಎಂದಿದ್ದಾರೆ. ಅವರ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯ ಸೂಳೇಭಾವಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಜಯ್ ಪಾಟೀಲ್ ಈ ಭಾಷಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ) ಬಾಬ್ರಿ ಮಸೀದಿ ನಿರ್ಮಿಸಲು ಉದ್ದೇಶಿಸಿದ್ದಾರೆ. ಯಾರಿಗೆಲ್ಲಾ ಬಾಬ್ರಿ ಮಸೀದಿ, ಟಿಪ್ಪು ಜಯಂತಿ ಬೇಕು ಅವರೆಲ್ಲಾ ಕಾಂಗ್ರೆಸ್ ಗೆ ಮತ ಹಾಕಿ. ಯಾರಿಗೆಲ್ಲಾ ಶಿವಾಜಿ ಮಹಾರಾಜ ಮತ್ತು ರಾಮ ಮಂದಿರ ಬೇಕು ಅವರೆಲ್ಲಾ ಬಿಜೆಪಿಗೆ ಮತ ಹಾಕಬೇಕು," ಎಂದು ಹೇಳಿದ್ದಾರೆ.
ಸಂಜಯ್ ಪಾಟೀಲ್ ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಗುರಿಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.