ಸ್ಮಶಾನದಲ್ಲಿ ಇದೇನು ಸಚಿವರ ವಿನೂತನ ಕಾರ್ಯಕ್ರಮ!
ಬೆಳಗಾವಿ, ಡಿ 1: ಸಮಾಜದಲ್ಲಿರುವ ಮೌಢ್ಯ, ಮೂಢನಂಬಿಕೆಗಳನ್ನು ದೂರಮಾಡಲು ಮುಂದಾಗಿರುವ ಅಬಕಾರಿ ಸಚಿವ ಮತ್ತು ಬೆಳಗಾವಿ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದೇ ಬರುವ ಡಿಸೆಂಬರ್ ಆರರಂದು ಡಾ.ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ದಿನದಂದು ಬೆಳಗಾವಿಯ ಸ್ಮಶಾನದಲ್ಲಿ ಸರಕಾರೀ ಪ್ರಾಯೋಜಿತ ಕಾರ್ಯಕ್ರಮವನ್ನು ಜಾರಕಿಹೊಳಿ ಹಮ್ಮಿ ಕೊಂಡಿದ್ದಾರೆ. (ಮೂಢನಂಬಿಕೆ ವಿರುದ್ದ ಮತ್ತೆ ಧರಣಿ)
ಅಂದು ಇಡೀ ದಿನ ಸ್ಮಶಾನದಲ್ಲಿ ಹಲವಾರು ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದೆ. ನಗರದ ಸದಾಶಿವ ನಗರದಲ್ಲಿರುವ ವೈಕುಂಠಧಾಮ ಸ್ಮಶಾನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಸಮಾಜದಲ್ಲಿರುವ ಮೌಢ್ಯತೆ, ಮೂಢನಂಬಿಕೆಗಳನ್ನು ದೂರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅಂದು ವಿಚಾರಗೋಷ್ಠಿ, ಚರ್ಚೆಗಳು ದಿನವಿಡೀ ನಡೆಯಲಿದೆ. ಸ್ಮಶಾನದಲ್ಲೇ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಡಿಸೆಂಬರ್ ಆರರಂದು ನಾವು ಮತ್ತು ಪಾಲಿಕೆಯ ಹಿರಿಯ ಅಧಿಕಾರಿಗಳು ಸ್ಮಶಾನದಲ್ಲೇ ವಾಸ್ತವ್ಯ ಹೂಡಲಿದ್ದೇವೆ. ತುಂಬಾ ದಿನದಿಂದ ಇಂತಹ ಕಾರ್ಯಕ್ರಮವೊಂದನ್ನು ಆಯೋಜಿಸ ಬೇಕೆಂದು ನಿರ್ಧರಿಸಿದ್ದೆ, ಆದರೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೂಢನಂಬಿಕೆಯ ವಿರುದ್ದ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ. ಪಾಲಿಕೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರೂ, ಯಾವುದೇ ರಾಜಕಾರಣಿಗಳಿಗೆ ಇದಕ್ಕೆ ಆಹ್ವಾನಿಸಲಿಲ್ಲ ಎಂದು ಜಾರಕಿಹೊಳಿ ಸ್ಪಷ್ಟ ಪಡಿಸಿದ್ದಾರೆ.