ಜ.12 ಬಾಗಲಕೋಟೆಯ ಮುಗಳಖೋಡಾ ಜಾತ್ರೇಲಿ ಮೋದಿ ಭಾಗಿ, ಅದು ಹೇಗೆ ಓದಿ
ಬೆಳಗಾವಿ, ಜನವರಿ 08: ಮುಗಳಖೋಡ ಜಿಡಗಾಮಠದ ಅದ್ಧೂರಿ ಜಾತ್ರೆ ಜನವರಿ 12 ರಿಂದ 14 ರವರೆಗೆ ನಡೆಯಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಬೆಳಗಾವಿಯಲ್ಲಿ ಸೋಮವಾರ ಚಕ್ರವರ್ತಿ ಸೂಲಿಬೆಲೆ ಹಾಗೂ ಶಾಸಕ ಪಿ. ರಾಜೀವ್ ಪತ್ರಿಕಾಗೋಷ್ಠಿ ನಡೆಸಿ, ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಇದಾಗಿದ್ದು, ಜಿಡಗಾಮಠದ ಪೀಠಾಧ್ಯಕ್ಷ ಡಾ. ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಜನವರಿ12 ರಂದು ವಿವೇಕಾನಂದರ ಜಯಂತಿ. ಆ ದಿನ 10 ಸಾವಿರ ಮಂದಿ ವಿವೇಕಾನಂದರ ರೀತಿ ವೇಷ ಧರಿಸಲಿದ್ದಾರೆ. 125 ಕೆ.ಜಿ. ಯೂನಿಟ್ ನಷ್ಟು ರಕ್ತದಾನ ಮಾಡಲಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜನವರಿ 13ರಂದು 770 ಅಮರ ಶರಣ ಗಣಾಧೀಶರ ಪಾದಪೂಜೆ ನಡೆಯಲಿದೆ. ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ, ಅರುಣಿಮಾ ಸಿನ್ಹಾ, ಯೋಗ ಗುರು ಬಾಬಾ ರಾಮದೇವ್, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
14 ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಗುರುನಾನಕ್ ಝರ್ ಸಂಸ್ಥಾನದ ಜಾನಿ ದರಬಾರ್ ಸಿಂಗ್, ಸಿಎಂ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವ ರಮೇಶ ಜಾರಕಿಹೊಳಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.