ಹೊಸ ಪಕ್ಷ ಸ್ಥಾಪನೆಗೆ ಮುಂದಾದ ವರ್ತೂರು ಪ್ರಕಾಶ್
ಬೆಳಗಾವಿ, ನವೆಂಬರ್ 28 : ರಾಜ್ಯದ ಬಲಿಷ್ಠ ಕುರುಬ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ವರ್ತೂರು ಪ್ರಕಾಶ್ ಅವರು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ.
ವರ್ತೂರು ಪ್ರಕಾಶ್ ಅವರು "ನಮ್ಮ ಕಾಂಗ್ರೆಸ್' ಎಂಬ ಪಕ್ಷವನ್ನು ಸ್ಥಾಪಿಸುತ್ತಿದ್ದು, ಡಿಸೆಂಬರ್ 19ರಂದು ಕೂಡಲಸಂಗಮದಲ್ಲಿ ನೂತನ ಪಕ್ಷ ಉದಯವಾಗಲಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 'ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಜನರ ಬಗ್ಗೆ ಅರಿವಿಲ್ಲ, ರಾಷ್ಟ್ರೀಯ ಪಕ್ಷಗಳು ಜನರ ಕಷ್ಟಕ್ಕೆ ಸ್ಪಂದಿಸಲು ಸೋತಿವೆ ಹಾಗಾಗಿ ಬಲಿಷ್ಠ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ' ಎಂದು ಅವರು ನಮ್ಮ ಕಾಂಗ್ರೆಸ್ ಪಕ್ಷ ಸ್ಥಾಪನೆಯ ಹಿಂದಿರುವ ಉದ್ದೇಶ ತಿಳಿಸಿದ್ದಾರೆ.
ಚಾಮರಾಜನಗರದಿಂದ ಬೀದರ್ ವರೆಗೆ ರಾಜ್ಯದ ಎಲ್ಲ ಕಡೆ ಪ್ರವಾಸ ಮಾಡಿ, ರಾಷ್ಟ್ರೀಯ ಪಕ್ಷಗಳ ಹುಳುಕುಗಳನ್ನು ಜನರ ಮುಂದಿಡುತ್ತೇನೆ, ಜನರಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯ ಮನವರಿಕೆ ಮಾಡಿಕೊಡುತ್ತೇನೆ' ಎಂದರು.
ಪಕ್ಷ ಉದ್ಘಾಟನೆಯ ದಿನದಂದು ರಾಜ್ಯದ ಹಲವು ಕಡೆಗಳಿಂದ ಸುಮಾರು ನಾಲ್ಕರಿಂದ , ಐದು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಬಿ.ಜೆ.ಪಿ, ಕಾಂಗ್ರೆಸ್ ಪಕ್ಷದ ಶಾಸಕರೂ 'ನಮ್ಮ ಕಾಂಗ್ರೆಸ್' ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
ಮಾಲೂರು ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವರ್ತೂರು ಪ್ರಕಾಶ್ ಅವರು ಈ ಬಾರಿ ತಮ್ಮದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ ಅಷ್ಟೆ ಅಲ್ಲದೆ ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಲೂ ಯೋಜನೆ ಹೆಣೆದಿದ್ದಾರೆ.
ವರ್ತೂರು ಪ್ರಕಾಶ್ ಅವರ ಪಕ್ಷದಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆ, ಯಾವ ಪಕ್ಷಕ್ಕೆ ನಷ್ಟವಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.