ಬೆಳಗಾವಿ: ಪೊಲೀಸರಿಗೆ ಆವಾಜ್ ಹಾಕಿದ ಶಾಸಕ ಫಿರೋಜ್ ಸೇಠ್
ಬೆಳಗಾವಿ, ಡಿಸೆಂಬರ್ 21: ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಬೆಳಗಾವಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಆವಾಜ್ ಹಾಕಿದ್ದಾರೆ.
ಮೂರು ದಿನದ ಹಿಂದಷ್ಟೆ ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ನಡೆದ ಕಲ್ಲು ತೂರಾಟ ಹಾಗೂ ಆ ನಂತರ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಮುಸ್ಲಿಂ ಯುವಕರನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಫಿರೋಜ್ ಸೇಠ್ ಅವರು ಪೀಸ್ ಕಮಿಟಿ (ಶಾಂತಿ ಸಮಿತಿ) ಸಭೆಯಲ್ಲಿ ಏರು ಧನಿಯಲ್ಲಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ.
ಐಜಿಪಿ, ಡಿಸಿಪಿಗಳು ಸೇರಿದ್ದ ಈ ಸಭೆಯಲ್ಲಿ ಫಿರೋಜ್ ಸೇಠ್ ಅವರು ಪೊಲೀಸರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಕೂಡಲೇ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡಿ ಎಂದು ದರ್ಪ ತುಂಬಿದ ಆದೇಶದ ಧನಿಯಲ್ಲಿ ಹೇಳಿದ್ದಾರೆ.
'ನಿಮ್ಮ ಪೊಲೀಸ್ ಅಧಿಕಾರಿಗಳಿಗೆ ಬುದ್ಧಿ ಇಲ್ಲವಾ, ಗಲಾಟೆ ಸ್ಥಳಕ್ಕೆ ಹೆಲ್ಮೆಟ್ ಇಲ್ಲದೇ ಹೋಗ್ತಾರೆ, ಮರುದಿನ ಪೊಲೀಸರಿಗೆ ಕಲ್ಲಿಂದ ಹೊಡೆದರು ಅಂತಾ ಗಲಾಟೆ ಮಾಡ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಶಾಸಕ ಸೇಠ್ ರೇಗಾಡಿದರು.
ಗಲಭೆ ಸಂಬಂಧ ಬಂಧಿಸಿರುವ 17 ಜನ ಮುಸ್ಲೀಂ ಯುವಕರನ್ನು ಕೂಡಲೇ ಬಿಡುಗಡೆ ಮಾಡಿ. ಅದೇ ನಮಗೆ ಪರಿಹಾರ. ನಾವೀಲ್ಲಿ ನಮ್ಮಕ್ಕಳಿಗೆ ಉಣ್ಣಿಸಿ ತಿನ್ನಿಸಿ ಬೆಳಸ್ತೀವಿ. ನೀವು ಪೊಲೀಸರು ಬಂಧಿಸಿ ಬಳ್ಳಾರಿಗೆ ಕಳಸ್ತೀರಾ ಎಂದು ಜೋರು ಮಾಡಿದರು.
ಪೊಲೀಸರು ಬಂಧಿಸಿರುವ ಮುಸ್ಲೀಂ ಯುವಕರಲ್ಲಿ ಇಂದೋರ, ಮಧ್ಯಪ್ರದೇಶದವರಿದ್ದಾರೆ ಅವರೇಲ್ಲರೂ ಅಮಾಯಕರು. ಪೊಲೀಸ್ ಇಲಾಖೆ ತನ್ನ ಮೈಂಡ್ ಸೆಟ್ ಬದಲಾಯಿಸಬೇಕಿದೆ. ಮುಸ್ಲಿಂರನ್ನ ಸ್ಪಾಟ್ ಟಾರ್ಗೆಟ್ ಮಾಡಲಾಗ್ತಿದೆ ಎಂದ ಅವರು ಪೊಲೀಸರಿಗೆ ಜನರು ಹೆದರುವುದು ಬಿಟ್ಟಿದ್ದಾರೆ. ದೋ ನಂಬರ್ ಧಂದೆ ಮಾಡುವವನು ಕೂಡ ಇಂದು ಪೊಲೀಸರ ಬಗ್ಗೆ ಹಗುರುವಾಗಿ ಮಾತನಾಡುತ್ತಾನೆ ಎಂದು ಪೊಲೀಸರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದರು.