ಬೆಂಕಿ ಹಚ್ಚುವವರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿರುವ ಷಾ: ಖಾದರ್
ಬೆಳಗಾವಿ, ಡಿಸೆಂಬರ್ 15: ಬಿಜೆಪಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಪಕ್ಷ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಜಯ ನಮ್ಮದೇ: ಸಚಿವ ಯು ಟಿ ಖಾದರ್ ಸಂದರ್ಶನ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯು ಕರಾವಳಿ ಪ್ರದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಅಮೀತ್ ಷಾ ಅವರು ಬೆಂಕಿ ಹಚ್ಚುವವರಿಗೆ ಕೆಂದ್ರದಲ್ಲಿ ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದು ಅವರು ಪರೋಕ್ಷವಾಗಿ ಅನಂತ್ ಕುಮಾರ್ ಹೆಗಡೆ ಅವರನ್ನು ಮೂದಲಿಸಿದರು.
ಮಂಗಳೂರು, ದಕ್ಷಿಣ ಕನ್ನಡದಲ್ಲಿ ಬಿಜೆಪಿ ನಾಯಕರು ಬೆಂಕಿ ಹಚ್ಚುವ ಮಾತುಗಳನ್ನೆ ಆಡುತ್ತಿದ್ದಾರೆ ಎಂದ ಅವರು ಕರಾವಳಿ ಗಲಭೆ ಪ್ರಕರಣದಲ್ಲಿ ಜೆಡಿಎಸ್ನ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಮಹತ್ವ ಕೊಡಬೇಕಿಲ್ಲ ಎಂದರು.
ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಜನರಿಲ್ಲದೆ ಬಣಗುಡುತಿದ್ದ ಪ್ರಚಾರ ಮೆರವಣಿಗೆ ಮಾಡುತ್ತಿದ್ದ ಉ.ಟಿ.ಖಾದರ್ ಅವರ ವಿಡಿಯೋದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು 'ನನ್ನ ಗುಜರಾತ್ ಪ್ರಚಾರದ ವಿಡಿಯೋ ವೈರಲ್ ಮಾಡಿದವರಿಗೆ ಧನ್ಯವಾದ. ಗುಜರಾತಿನ ಬೇರೆಕಡೆಗೂ ಪ್ರಚಾರ ಮಾಡಿದ್ದೇನೆ ಅಲ್ಲೆಲ್ಲಾ ಸಾಕಷ್ಟು ಜನ ಸೇರಿದ್ದರು. ಆದರೆ ಜನರಿಲ್ಲದ ಆ ವಿಡಿಯೋವನ್ನೇ ಕೆಲವರು ವೈರಲ್ ಮಾಡಿದ್ದಾರೆ. ಅವರು ವಿಡಿಯೋ ವೈರಲ್ ಮಾಡಿದ್ದರಿಂದ ದೇಶಕ್ಕೆ ನನ್ನ ಪರಿಚಯವಾಗಿದೆ ಎಂದು ಹೇಳಿದರು.