ಖಾನಾಪುರದ ಬಸಪ್ಪ ಬಜಂತ್ರಿ ಶ್ರೀನಗರದಲ್ಲಿ ಹುತಾತ್ಮ
ಬೆಳಗಾವಿ, ಏಪ್ರಿಲ್ 04 : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಪಂತ ಚೌಕ್ ನಲ್ಲಿ ಸೋಮವಾರ ಸಿಆರ್ಪಿಎಫ್ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತನಾಗಿರುವ ಹೆಡ್ ಕಾನ್ಸ್ಟೇಬಲ್ ಬಸಪ್ಪ ಬಜಂತ್ರಿ ಅವರು ಕರ್ನಾಟಕದವರು.
ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಮೃತರಾದ ಬಸಪ್ಪ ಬಜಂತ್ರಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದವರು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ್ದು ಇದೇ ಗ್ರಾಮದಲ್ಲಿ. [ಸಿಆರ್ಪಿಎಫ್ ಮೇಲೆ ಉಗ್ರರ ದಾಳಿ, ಓರ್ವನ ಸಾವು, ಐವರಿಗೆ ಗಾಯ]
ಶ್ರೀನಗರದಲ್ಲಿ ನಡೆಯಲಿರುವ ಉಪಚುನಾವಣೆಯ ಭದ್ರತೆಗಾಗಿ ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆಗ ಉಗ್ರರು ಸಿಬ್ಬಂದಿಯಿದ್ದ ವಾಹನದ ಮೇಲೆ ಗುಂಡಿನ ಮಳೆಗರೆದು ಪರಾರಿಯಾಗಿದ್ದರು. [ಟೂರಿಸಂ ಬೇಕಾ, ಟೆರರಿಸಂ ಬೇಕಾ?: ಕಾಶ್ಮೀರಿಗಳಿಗೆ ಮೋದಿ ಪ್ರಶ್ನೆ]
ಈ ಘಟನೆಯಲ್ಲಿ 6 ಪೊಲೀಸರು ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಕರ್ನಾಟಕದ ಬಸಪ್ಪ ಬಜಂತ್ರಿ ಅವರು ಅಸುನೀಗಿದರು. ಪರಾರಿಯಾಗಿರುವ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
WATCH: Wreath laying ceremony of Head Constable Basappa Bajantri who lost his life in Pantha Chowk (J&K) attack https://t.co/bwpn43VEeb
— ANI (@ANI_news) April 4, 2017
ಹುತಾತ್ಮರಾದ ಬಸಪ್ಪ ಬಜಂತ್ರಿ ಅವರಿಗೆ ಶ್ರೀನಗರದಲ್ಲಿ ಸೇನಾ ನಿಯಮದಂತೆ ಮಂಗಳವಾರ ಅಂತಿಮ ನಮನ ಸಲ್ಲಿಸಲಾಯಿತು. ಅವರ ದೇಹವನ್ನು ಅವರ ಹುಟ್ಟೂರಿಗೆ ಸದ್ಯದಲ್ಲಿಯೇ ತರಲಾಗುವುದೆಂದು ತಿಳಿದುಬಂದಿದೆ.