ಹಿಂಡಲಗಾ ಜೈಲಿನಲ್ಲಿ ಕಡ್ಲೆಕಾಯಿ ಸಿಪ್ಪೆಯೊಳಗೆ ಗಾಂಜಾ ಪೂರೈಕೆ
ಬೆಳಗಾವಿ, ಜುಲೈ 14: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಗಾಂಜಾ ಕೂಡ ಆರಾಮವಾಗಿ ಸಿಗ್ತಿದೆ ಎಂಬ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಾಂಜಾವನ್ನು ಜೈಲಿನೊಳಗೆ ತರಿಸಲು ಎಂಥ ಖತರ್ನಾಕ್ ಉಪಾಯ ಮಾಡಿದ್ದಾರೆ ಗೊತ್ತೆ?
ಮಾಧ್ಯಮದ ಮುಂದೆ ಮಾತನಾಡಿದ ರೂಪಾಗೆ ನೋಟಿಸ್: ಸಿದ್ಧರಾಮಯ್ಯ
ಹೌದು, ನೀವು ಖಂಡಿತಾ ಅಚ್ಚರಿ ಪಡ್ತೀರಿ. ಕಡ್ಲೆಕಾಯಿ ಸಿಪ್ಪೆಯೊಳಗೆ ಗಾಂಜಾ ಇಟ್ಟು, ಅದನ್ನು ಕೈದಿಗಳಿಗೆ ಪೂರೈಸುತ್ತಿರುವುದು ಬಯಲಾಗಿದೆ. ಯಾರೋ ವ್ಯಕ್ತಿ ಕೈದಿಯೊಬ್ಬನಿಗೆ ತಂದುಕೊಟ್ಟಿದ್ದ ಕಡಲೆಕಾಯಿಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಈ ಅಕ್ರಮ ದಂಧೆ ಗೊತ್ತಾಗಿದೆ.
ಕಾರಾಗೃಹದ ಸಂದರ್ಶಕರ ಕೊಠಡಿಯಲ್ಲಿ ಪತ್ತೆಯಾದ ಕಡ್ಲೆಕಾಯಿಯೊಳಗೆ ಗಾಂಜಾ ತುಂಬಲಾಗಿತ್ತು. ಇದರಿಂದ ಹುಷಾರಾದ ಸಿಬ್ಬಂದಿ, ಕೈದಿಗಳ ಕಡೆಯವರು ಕಡ್ಲೆಕಾಯಿ ತಂದುಕೊಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಲಂಚ ಆರೋಪ ಸುಳ್ಳು, ತನಿಖೆಗೆ ಸಿದ್ಧ-ರೂಪಾಗೆ ಸತ್ಯನಾರಾಯಣ ತಿರುಗೇಟು
ಗಾಂಜಾ ಕಳ್ಳಸಾಗಣೆ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಕೈದಿಗಳಿಗೆ ಕಡಲೇ ಬೀಜ ತಂದಿದ್ದರೆ ಅನುಮಾನ ಇರುತ್ತಿರಲಿಲ್ಲ. ಆದರೆ ಕಡಲೆಕಾಯಿ ಸಿಪ್ಪೆ ಸಮೇತ ಇದ್ದದ್ದು ಅನುಮಾನಕ್ಕೆ ಕಾರಣವಾಗಿ ಪರಿಶೀಲಿಸಿದೆವು. ಸಿಪ್ಪೆ ಬಿಡಿಸಿ ಬೀಜವನ್ನು ತೆಗೆದು ಆ ಜಾಗದಲ್ಲಿ ಗಾಂಜಾ ತುಂಬಿ ಮತ್ತೆ ಸಿಪ್ಪೆಯನ್ನು ಅಂಟಿಸಿ ಪೂರೈಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಂಜಾ ತುಂಬಿದ್ದ ಕಡ್ಲೆಕಾಯಿ ಒಬ್ಬ ಕೈದಿ ಬಳಿ ಸಿಕ್ಕಿದೆ. ಆತನಿಗೆ ತಂದುಕೊಟ್ಟವರು ಯಾರು ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.