ಮಹಾದಾಯಿ ವಿವಾದ: "ಯಾವುದೇ ಜಾಗ, ಸ್ಥಳದಲ್ಲಿ ಕರ್ನಾಟಕ ಮಾತುಕತೆಗೆ ಸಿದ್ದ"
ಬೆಳಗಾವಿ, ಡಿಸೆಂಬರ್ 22: ಮಹಾದಾಯಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸುವ ಸಂಬಂಧ ಗೋವಾ ಸರಕಾರದ ಜತೆ ಯಾವುದೇ ಸ್ಥಳ, ದಿನಾಂಕದಂದು ಮಾತುಕತೆ ನಡೆಸಲು ಸಿದ್ದ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.
ಗೋವಾ ಸರ್ಕಾರದ್ದು 'ಕೀಳು ರಾಜಕಾರಣ': ಎಂ.ಬಿ.ಪಾಟೀಲ್
ಇದೇ ವೇಳೆ ಜಲ ವಿವಾದ ಬಗೆಹರಿಸಲು 'ಪ್ರೊಟೋಕಾಲ್' ಅನುಸರಿಸದೇ ಇರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಡೆಯ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಪರಿಕ್ಕರ್, ಗೋವಾಕ್ಕೆ 'ಸಮಂಜಸವಾದ' ಮತ್ತು 'ಸಮರ್ಥನೀಯ' ಪ್ರಮಾಣದ ನೀರು ನೀಡಲು ಯಾವುದೇ ತಕರಾರಿಲ್ಲ ಎಂದಿದ್ದರು. ಆದರೆ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ಮುಂದಿದೆ ಎಂಬುದನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಜತೆಗೆ ನ್ಯಾಯಾಧೀಕರಣ ಸಲಹೆ ನೀಡಿದಂತೆ ವಿವಾದ ಬಗೆಹರಿಸಲು ಎರಡೂ ಕಡೆಯವರು ಚರ್ಚೆ ನಡೆಸಬೇಕಾಗಿದೆ ಎಂದು ಪರಿಕ್ಕರ್ ಹೇಳಿದ್ದರು.
ಬಿಜೆಪಿ ನಾಯಕರ ನಡೆ ಖಂಡಿಸಿ ಡಿ. 27ರಂದು ಉತ್ತರ ಕರ್ನಾಟಕ ಬಂದ್
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂ.ಬಿ ಪಾಟೀಲ್ ಗೋವಾ ಮುಖ್ಯಮಂತ್ರಿಗಳು ಈ ಸಂಬಂಧ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ ಸರಿ ಇರುತ್ತದೆ ಎಂದು ಹೇಳಿದ್ದಾರೆ.
ಮಾತುಕತೆಗೆ ಕೋರಿ ಸಿದ್ದರಾಮಯ್ಯ ಹಲವು ಪತ್ರಗಳನ್ನು ಬರೆದಿದ್ದರು. ಇದಕ್ಕೆ ಉತ್ತರ ನೀಡುವ ಬದಲು ಪರಿಕ್ಕರ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ ಎಂದು ಪಾಟೀಲ್ ದೂರಿದ್ದಾರೆ. ಆದರೆ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಪ್ರತಿಷ್ಠೆ ಬಿಟ್ಟು ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಮಾತುಕತೆಗೆ ಸಿದ್ದವಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ. ಯಾವುದೇ ಸ್ಥಳ, ದಿನದಂದು ಮಾತುಕತೆಗೆ ಸಿದ್ದವಿರುವುದಾಗಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಕಳಸ-ಬಂಡೂರಿ ನಾಲೆಗಳಿಗೆ ಗೋವಾ ಸರಕಾರದಿಂದ 7.56 ಟಿಎಂಸಿ ನೀರು ಕೇಳುತ್ತಿದೆ. ಬೆಳಗಾವಿ, ಗದಗ ಜಿಲ್ಲೆಯ ಕುಡಿಯುವ ನೀರು ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಈ ಬೇಡಿಕೆ ಇಟ್ಟಿದೆ.
ಈ ಹಿಂದೆ ಗೋವಾ ನ್ಯಾಯಾಲಯದ ಹೊರಗೆ ವಿಷಯ ಇತ್ಯರ್ಥಪಡಿಸಲು ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಅಮಿತ್ ಶಾ ಮಧ್ಯಸ್ಥಿಕೆಯಿಂದ ಮಾತುಕತೆಗೆ ಸಿದ್ಧವಾಗಿದೆ.