ಐಜಿಪಿ ಅಲೋಕ್ ಕುಮಾರ್ ಗೆ ಹಿಂಡಲಗಾ ಜೈಲಿನ ಕೈದಿಯಿಂದ ಜೀವ ಬೆದರಿಕೆ ಕರೆ
ಬೆಳಗಾವಿ, ಏಪ್ರಿಲ್ 26: ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕಕುಮಾರ್ ಅವರಿಗೆ ಬಂದಿದ್ದ ಜೀವ ಬೆದರಿಕೆ ಕರೆಯ ಮೂಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಇದೊಂದು ಅನಾಮಧೇಯ ಕರೆ ಆಗಿತ್ತು. ಇದರಿಂದ ಪೊಲೀಸ್ ಇಲಾಖೆಯಲ್ಲಿ ಆತಂಕ ಎದುರಾಗಿತ್ತು. ಮೊಬೈಲ್ ಕರೆ ಮಾಡಿದ್ದ ವ್ಯಕ್ತಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ.
ಐದು ದಿನಗಳ ಹಿಂದೆ ಮನೆಯಲ್ಲಿದ್ದ ವೇಳೆ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಕರೆ ಬಂದಿತ್ತು. ತನ್ನನ್ನು ತಾನು ನಕ್ಸಲೈಟ್ ಎಂದೂ, ತಾನು ಏನು ಎಂಬುದನ್ನು ತೋರಿಸುವುದಾಗಿ ಹೇಳಿದ್ದ. ಜತೆಗೆ ಅದೇ ಸಂಖ್ಯೆಯಿಂದ ಸಂದೇಶ ಸಹ ಬಂದಿತ್ತು. ಈ ಬಗ್ಗೆ ಐಜಿಪಿ ಆಪ್ತ ಸಹಾಯಕ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು.
ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಳಗಾವಿ ಶಾಸಕರ ವಿರುದ್ಧ FIR ದಾಖಲು
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ, ಗಲ್ಲು ಶಿಕ್ಷೆಗೆ ಒಳಗಾದ ಕೈದಿ ಶಹಜಾನ್ ಎಂಬಾತನೇ ಬೆದರಿಕೆ ಕರೆ ಮಾಡಿರುವುದಾಗಿ ತಿಳಿದುಬಂದಿದೆ. ಇನ್ನು ಆತನಿಂದ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಕೂಡ ವಶಪಡಿಸಿಕೊಳ್ಳಲಾಗಿದೆ. ಅವನಿಗೆ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಬೆದರಿಕೆ ಕರೆಗಳು ಹೊಸದಲ್ಲ. ಕೆಲಸ ಇರದ ಕೈದಿಗಳು ಖಿನ್ನತೆಯಿಂದ ಹೀಗೆ ಮಾಡುತ್ತಾರೆ ಎಂದು ಹೇಳಿದ್ದಾರೆ.