ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್ ಸಿಟ್ಟು
Recommended Video
ಬೆಳಗಾವಿ, ಸೆಪ್ಟೆಂಬರ್ 07: ರಾಜ್ಯ ರಾಜಕಾರಣದಲ್ಲಿ ಕುತೂಹಲ ಉಂಟು ಮಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ಗುದ್ದಾಟ ಸಂಧಾನದಿಂದ ಮೇಲ್ನೋಟಕ್ಕೆ ತಣ್ಣಗಾಗಿದೆ ಆದರೆ ಕುದಿ ಇನ್ನೂ ಆರಿದಂತಿಲ್ಲ.
ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ಗುದ್ದಾಟಕ್ಕೆ ಕಾರಣವಾಗಿದ್ದ ಪಿಎಲ್ಡಿ ಬ್ಯಾಂಕ್ ಚುನಾವಣೆ ಇದ್ದ ಕಾರಣ ಬೆಂಗಳೂರಿನಿಂದ ಬೆಳಗಾವಿಗೆ ದೌಡಾಯಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಇಂದು ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಸಂಧಾನ ಮಾಡಿಸಿದ್ದಾರೆ.
ಖಂಡ್ರೆ ಸಂಧಾನ ಯಶಸ್ವಿ: ಲಕ್ಷ್ಮಿ ಬಳಗಕ್ಕೆ ಪಿಎಲ್ಡಿ ಬ್ಯಾಂಕ್ನಲ್ಲಿ ಅವಿರೋಧ ಗೆಲುವು
ಸಂಧಾನದ ನಂತರ ಮಾತನಾಡಿದ ಈಶ್ವರ್ ಖಂಡ್ರೆ 'ಇಬ್ಬರು ಮುಖಂಡರ ನಡುವೆ ಸಮನ್ವಯ ಕೊರತೆಯಿಂದ ಗೊಂದಲ ಆಗಿತ್ತಷ್ಟೆ ಹೊರತು, ಬೇರೆ ಏನೂ ಇಲ್ಲ ಈಗ ಎಲ್ಲ ಸರಿಯಾಗಿದೆ' ಎಂದು ತಿಪ್ಪೆ ಸಾರಿಸಿದರು. ಸತೀಶ್ ಜಾರಕಿಹೊಳಿ ಸಹ ಇದನ್ನೇ ಹೇಳಿದರು ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾತುಗಳು ಒಳಗಿನ ಬೆಂಕಿ ಇನ್ನೂ ಆರಿಲ್ಲ ಎಂಬುದು ಸೂಚ್ಯವಾಗಿ ಹೇಳುತ್ತಿತ್ತು.
ಸದಾ ವಿವಾದಕ್ಕೆ ಅಂಟಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಯಾರು?
ಮಾತನಾಡಲು ಒಲ್ಲೆ ಎಂದ ಹೆಬ್ಬಾಳ್ಕರ್
ಈಶ್ವರ್ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ಮಾತನಾಡಿದ ನಂತರ ಲಕ್ಷ್ಮಿ ಅವರನ್ನು ಮಾತನಾಡಲು ಈಶ್ವರ್ ಖಂಡ್ರೆ ಕೇಳಿದರು ಆದರೆ ಲಕ್ಷ್ಮಿ ಅವರು ಮಾತನಾಡುವುದಿಲ್ಲ ಎಂದರು. ಆದರೆ ಬಿಡದೆ ಸುದ್ದಿಗಾರರು ಪಿಎಲ್ಡಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿ ಎಂದರು.
'ನನಗೆ ಬೈದವರನ್ನು ದೇವರು ನೋಡಿಕೊಳ್ಳಲಿ'
ಆಗ ಮಾತನಾಡಿದ ಲಕ್ಷ್ಮಿ ಅವರು, 'ಆಯ್ಕೆಯಾದವರು ನಮ್ಮ ಅಭ್ಯರ್ಥಿ ಮಾತ್ರ ಅಲ್ಲ ಕಾಂಗ್ರೆಸ್ ನ ಅಭ್ಯರ್ಥಿ ಎಂದರು, ಆ ನಂತರ ಸತೀಶ್ ಅವರು ಬಳಸಿದ್ದ ನಿಂದನಾತ್ಮಕ ಭಾಷೆಯ ಬಗ್ಗೆ ಸುದ್ದಿಗಾರರು ಕೇಳಿದರು. 'ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ' ಎಂದು ಹೇಳಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎದ್ದು ಹೋದರು. ಅದರ ಹಿಂದೆಯೇ ಸುದ್ದಿಗೋಷ್ಠಿಯು ಮುಕ್ತಾಯವಾಯಿತು.
ಲಕ್ಷ್ಮಿ ಅವರಿಗೆ ಸಂಧಾನ ತೃಪ್ತಿ ತಂದಿಲ್ಲ
ಲಕ್ಷ್ಮಿ ಅವರ ಮಾತಿನಿಂದಲೇ ತಿಳಿಯುತ್ತದೆ ಸಂಧಾನ ಅವರಿಗೆ ತೃಪ್ತಿ ತಂದಿಲ್ಲವೆಂದು. ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲೂ ಅವರು 'ಕೀಳಾಗಿ ಮಾತನಾಡಿದುದ್ದಕ್ಕೆ ತಮಗೆ ಸಿಟ್ಟು ಬಂದಿತ್ತೇ ವಿನಃ ಬೇರೇನೂ ನನ್ನ ಮನಸಿನಲ್ಲಿರಲಿಲ್ಲ' ಎಂದಿದ್ದರು. ಆದರೆ ಸಂಧಾನದ ಬಳಿಕವೂ ಅವರ ಸಿಟ್ಟು ಶಮನವಾದಂತೆ ಕಾಣಲಿಲ್ಲ. ಸುದ್ದಿಗೋಷ್ಠಿಯಲ್ಲೂ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಪರಸ್ಪರ ಮಾತನಾಡಲಿಲ್ಲ.
ಸತೀಶ್ ಜಾರಕಿಹೊಳಿ ಏನು ಹೇಳಿದರು?
ಸಂಧಾನದ ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ಸ್ಥಳೀಯ ಸಮಸ್ಯೆಯನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಂಡಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಗೆ ಒಟ್ಟಾಗಿಯೇ ಪ್ರಚಾರಕ್ಕೆ ಹೋಗಲಿದ್ದೇವೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಪರ ಕೆಲಸಮಾಡಲಿದ್ದೇವೆ ಎಂದು ಹೇಳಿದರು.